Friday, June 11, 2021

ದೇವರಿದ್ದಾನೆ 

ಗುಡಿಸಲಲ್ಲಿ ರಾಮು ಅಮ್ಮನನ್ನು "ಹಸಿವು, ತಿನ್ನಲು ಏನಾದರೂ ಕೊಡಮ್ಮಾ" ಎಂದು ಪೀಡಿಸುತ್ತಿದ್ದ. ಅವಳು ದುಃಖದಿಂದ ಮಗು ಬಾಗಿಲ ಬಳಿ ನೀನು ಇಟ್ಟಿರುವ ಕೃಷ್ಣನ ವಿಗ್ರಹ ಇದೆಯಲ್ಲ, ಅದರ ಮುಂದೆ ಕುಳಿತು ದೇವರನ್ನು ಬೇಡಿಕೋ" ಎಂದು ಬೀಸುವ ದೊಣ್ಣೆಯನ್ನು ತಪ್ಪಿಸಿ, ಅಲ್ಲೇ ಹಿತ್ತಲಲ್ಲಿ ಬೆಳೆದಿದ್ದ ಮುಳ್ಳು ಹರವೆ ಸೊಪ್ಪನ್ನು ಬಿಡಿಸತೊಡಗಿದಳು. "ಏನೂ ಇಲ್ಲ ಎಂದರೆ ಈ ಸೊಪ್ಪಿನ ಸಾರೇ ಗತಿ" ಎಂದು ಮನದಲ್ಲಿ ದೇವರನ್ನು ಪ್ರಾರ್ಥಿಸಿದಳು. ಅದೇ ವೇಳೆಗೆ ರಾಮು ಸಾಕಿದ ನಾಯಿ ಓಡಿ ಬಂದು ಗುಡಿಸಲೊಳಗೆ ಸೇರಿಕೊಂಡಿತು. ಅದನ್ನು ಅಟ್ಟಿಸಿಕೊಂಡು ಬಂದ ಒಂದು ದೊಡ್ಡ ನಾಯಿ ಬಾಗಿಲ ಬಳಿ ಬೌ ಬೌ ಎಂದು ಬೊಗಳತೊಡಗಿತು. ಅದರ ಹಿಂದೆಯೇ ಅದರ ಒಡೆಯ, ಜೊತೆಗೆ ಅವನ ಪುಟ್ಟ ಮಗ ಓಡಿ ಬಂದು ತಮ್ಮ ನಾಯಿಗೆ ಬೆಲ್ಟ್ ಹಾಕಿ, "ಸುಮ್ಮನೆ ಬಾ, ಎಷ್ಟು ಗಲಾಟೆ ಎಂದು ಬೈದರು". ಆಗ ಆ ಹುಡುಗ ರಾಮುವನ್ನು ನೋಡಿ ನೀನು ಅಲ್ಲಿ ಏನು ಮಾಡುತ್ತಿದ್ದಿ? ಎಂದು ಕೇಳಿದ. ಆಗ ರಾಮು "ಇದು ನನ್ನ ದೇವರು, ಇವತ್ತು ಮನೆಯಲ್ಲಿ ಏನೂ ಇಲ್ಲ, ಏನಾದರೂ ತಿನ್ನಲು ಕೊಡು, ಎಂದು ಕೇಳಿಕೊಳ್ಳುತ್ತಿದ್ದೀನಿ" ಎಂದ. ಆಗ ಆ ಹುಡುಗನ ಅಪ್ಪ " ಆ ದೇವರು ನಿನಗೆ ಏನಾದರೂ ಕೊಡುತ್ತಾನೇನೋ?" ಎಂದರು. ರಾಮು, "ನನ್ನ ದೇವರು, ನಾನು ಕೇಳಿದ್ದನ್ನು ಕೊಟ್ಟೆ ಕೊಡುತ್ತಾನೆ" ಎಂದು ವಿಶ್ವಾಸದಿಂದ ಹೇಳಿದ. ಆಗ ಆ ಒಡೆಯ ರಾಮುವಿಗೆ ಕಣ್ಣು ಮುಚ್ಚಿಕೋ ಎಂದು ಹೇಳಿ ಮೆಲ್ಲಗೆ ಆ ವಿಗ್ರಹದ ಹಿಂದೆ ಒಂದು ಬಿಸ್ಕತ್ ಪ್ಯಾಕೆಟ್ ಮತ್ತು ನೂರು ರೂಪಾಯಿ ನೋಟು ಇಟ್ಟು ಸುಮ್ಮನೆ ಹೊರಟು ಹೋದರು. ಕಣ್ಣು ಬಿಟ್ಟ ರಾಮನಿಗೆ ಆ ನಾಯಿ, ಅದರ ಒಡೆಯ, ಆ ಹುಡುಗ ಯಾರೂ ಕಾಣಿಸಲಿಲ್ಲ. ಆದರೆ ದೇವರ ಹಿಂದೆ ಇದ್ದ ಬಿಸ್ಕತ್ ಪ್ಯಾಕೆಟ್, ೧೦೦ ರೂ  ಕಂಡಿತು. ಅಮ್ಮನನ್ನು ಕರೆದು " ಅಮ್ಮ, ಇಲ್ಲಿ ನೋಡು ದೇವರು ನಾನು ಹೇಳಿದ್ದನ್ನು ಕೇಳಿಸಿಕೊಂಡು ಇದನ್ನು ಕೊಟ್ಟಿದ್ದಾನೆ" ಎಂದು ಸಂತೋಷದಿಂದ ಕಿರುಚಿದ. ಅಮ್ಮ ಬಂದು "ಹೌದು ಕಂದ, ದೇವರು ಖಂಡಿತ ಇದ್ದಾನೆ" ಎಂದು ದೇವರಿಗೆ ಕೈ ಮುಗಿದಳು. 

ದೇವರು ಯಾವ ರೂಪದಲ್ಲಿ ಬರುತ್ತಾನೋ ಯಾರಿಗೆ ಗೊತ್ತು. ನಮ್ಮೆಲ್ಲರಲ್ಲೂ ದೇವರಿದ್ದಾನೆ ಅಲ್ಲವೇ? 

- ಜಗದೀಶ ಚಂದ್ರ ಬಿ ಎಸ್ -

No comments:

Post a Comment