Saturday, June 12, 2021

ತುಂಟ ಕೃಷ್ಣ ತರಕಾರಿ ಮಾರಿದ್ದು

 ತುಂಟ ಕೃಷ್ಣ ತರಕಾರಿ ಮಾರಿದ್ದು 

ಇದು ಶಾಲೆಯಲ್ಲಿ ನಡೆದ ಘಟನೆ. ನನ್ನ ಬಂಧುಗಳೊಬ್ಬರು ಇದನ್ನು ಹೇಳಿದರು. ನಕ್ಕು ನಕ್ಕೂ ಸುಸ್ತಾಯಿತು. ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ. 
ಶಾಲಾ ವಾರ್ಷಿಕೋತ್ಸವಕ್ಕೆ ಮಕ್ಕಳಿಗೆ ಹಾಡು, ನೃತ್ಯ, ನಾಟಕ ಎಲ್ಲವನ್ನು ಮಾಡಿಸಲು ತಯಾರಿ ಮಾಡಿಕೊಂಡಿದ್ದರು. ರಶ್ಮಿ, ಅಭಿ ಇಬ್ಬರೂ ಒಂದೇ ತರಗತಿಯ ಮಕ್ಕಳು. ಅಕ್ಕ ಪಕ್ಕದ ಮನೆಯವರೂ ಸಹ. ಆತ್ಮೀಯ ಗೆಳೆಯರೂ ಆಗಿದ್ದರು. 
ಶಾಲೆಯಲ್ಲಿ ರಶ್ಮಿಗೆ ಕೃಷ್ಣನ ವೇಷದ ಹಾಡು ಹಾಗೂ ಅಭಿಗೆ ತರಕಾರಿ ಮಾರುವ ಹಾಡಿಗೆ ನಾಟ್ಯ ನಿಗದಿ ಮಾಡಿದ್ದರು. ರಶ್ಮಿಗೆ ಅದೇಕೋ ಕೃಷ್ಣನಂತೆ ಹುಡುಗನಾಗಿ ನೃತ್ಯ ಮಾಡಲು ತಕರಾರು, ಮಾಡಲ್ಲಾ ಎಂದು ಗಲಾಟೆ. ಮೇಡಂಗೆ ಹೇಳಿದರೆ ಬೈದು ಬಾಯಿ ಮುಚ್ಚಿಸಿದ್ದರು. ಮನೆಯಲ್ಲೂ ಎಲ್ಲರೂ ಅವಳಿಗೆ ಬುದ್ಧಿ ಹೇಳಿ, ಪುಸಲಾಯಿಸಿ, ನೃತ್ಯಕ್ಕೆ ಒಪ್ಪಿಸಿದ್ದರು. ಅವಳಿಗೆ ಅಭಿ, ಬೇಕೇ ಬೇಕೇ ತರಕಾರಿ ಎಂಬ ಹಾಡನ್ನು ಹೇಳಿ ನೃತ್ಯ ಮಾಡುತ್ತಿದ್ದರೆ, ತನಗೂ ಅದನ್ನು ಮಾಡಬೇಕು ಎಂದು ಅಸೆ. ಮನೆಯಲ್ಲಿ ಅಭಿ ಅದನ್ನು ಪ್ರಾಕ್ಟೀಸ್ ಮಾಡುತ್ತಿದ್ದರೆ, ತಾನೂ ಬಂದು ಅವನೊಂದಿಗೆ ಕುಣಿಯುತ್ತಿದ್ದಳು. ಶಾಲೆಯಲ್ಲೂ ಅವಳು ಕೃಷ್ಣನ ಹಾಡಿಗಿಂತ ತರಕಾರಿ ಹಾಡಿಗೆ ಕುಣಿದದ್ದೇ ಹೆಚ್ಚು. 
ಅಂತೂ ವಾರ್ಷಿಕೋತ್ಸವದ ದಿನ ಬಂತು. ಶಾಲೆಯ ಒಂದು ದೊಡ್ಡ ಹಾಲ್ ನಲ್ಲಿ ಸಮಾರಂಭ ಇತ್ತು. ಎಲ್ಲರೂ ನೆರೆದಿದ್ದರು. ಅಭಿಯ ಸರದಿ ಬಂತು ತುಂಬಾ ಚೆನ್ನಾಗಿ ಹಾಡುತ್ತಾ ತರಕಾರಿಯ ಹಾಡನ್ನು ಹೇಳುತ್ತಾ ನೃತ್ಯ ಮಾಡಿದ. ಎಲ್ಲರಿಂದಲೂ ಭಾರಿ ಕರತಾಡನ ಬಂತು. ಸ್ವಲ್ಪ ಸಮಯದ ನಂತರ ರಶ್ಮಿಯ ಸರದಿ ಬಂತು. ಕಿರೀಟ, ನವಿಲುಗರಿ, ಕೊಳಲು ಎಲ್ಲವನ್ನು ಧರಿಸಿದ ರಶ್ಮಿ ನಿಜವಾಗಿ ಕೃಷ್ಣನಂತೆಯೇ ಕಾಣುತ್ತಿದ್ದಳು. ಸ್ಟೇಜಿಗೆ ಹೋಗಿ ಸುಮ್ಮನೆ ನಿಂತು ಬಿಟ್ಟಳು. ಎಲ್ಲರೂ, ಹಾಡು ಹಾಡು, ಎಂದು ಹುರಿದುಂಬಿಸಿದರು. ಆಗ ರಶ್ಮಿ ಬೇಕೇ ಬೇಕೇ ತರಕಾರಿ ಎಂದು ಹಾಡುತ್ತ ಕುಣಿಯಲು ಆರಂಭಿಸಿದಳು. ಅವಳ ಮೇಡಂಗೆ ಅಸಾಧ್ಯ ಸಿಟ್ಟು ಬಂತು. ಬೈಯಲು ಎದ್ದು ನಿಂತರು. ಆದರೆ ಪ್ರಿನ್ಸಿಪಾಲ್ ಮೇಡಂ ಎದ್ದು ನಿಂತು, ಎಲ್ಲರಿಗೂ, "ಮಕ್ಕಳು ಹೇಗೆ ಮಾಡುತ್ತಾರೋ ಮಾಡಲಿ, ಸುಮ್ಮನಿರಿ, ಅವರು ಏನು ಮಾಡಿದರೂ ಚೆನ್ನ" ಎಂದರು. ಎಲ್ಲರೂ ನಗುತ್ತಾ ಕೃಷ್ಣನ ತರಕಾರಿ ಹಾಡಿನ ಅಭಿನಯ ನೋಡಿ ಸಂತಸ ಪಟ್ಟರು. ನಕ್ಕು ನಕ್ಕು ಸುಸ್ತಾದರು. ನಂತರ ಅವಳ ಮೇಡಂ ಸ್ಟೇಜ್ ಬಳಿ ಹೋಗಿ, "ಚೆನ್ನಾಗಿ ಮಾಡಿದಿ, ತುಂಬಾ ಜಾಣೆ. ಈಗ ಕೃಷ್ಣನ ಹಾಡನ್ನು ಹಾಡಿ ನೃತ್ಯ ಮಾಡು" ಎಂದರು. ರಶ್ಮಿ ಅದನ್ನೂ ಚೆನ್ನಾಗಿ ಮಾಡಿದಳು. ಆದರೆ ನೆರೆದಿದ್ದ ಜನ, ಕೃಷ್ಣನ ತರಕಾರಿ ಹಾಡನ್ನೇ ಹೆಚ್ಚು ಇಷ್ಟ ಪಟ್ಟು ನಕ್ಕು ನಲಿದಾಡಿದರು. 
- ಜಗದೀಶ ಚಂದ್ರ ಬಿ ಎಸ್ - 

No comments:

Post a Comment