"ರಾಂ ಸ್ವಾಮಿ ಕಲಾ ಮಳಿಗೆ"
ನಾನು ಆ ದಿನ ಅಂಗಡಿ ಮಳಿಗೆಯ ಬಳಿ ಹೋಗಿದ್ದೆ. ಆಗ ಅಲ್ಲಿದ್ದ ವಯಸ್ಸಾದ ವ್ಯಕ್ತಿಯೊಬ್ಬರು "ಜಾತಿ ಹುಟ್ಟಿನಿಂದ ಬಂದದ್ದು ಅಲ್ಲ, ವೈದ್ಯನ ಮಗ ವೈದ್ಯನಾಗಲು ಸಾಧ್ಯವೇ, ಚಮ್ಮಾರನ ಮಗ ತಂದೆಯ ವೃತ್ತಿಯನ್ನು ಮುಂದುವರೆಸದಿದ್ದರೆ, ಚಮ್ಮಾರ ಹೇಗಾಗುತ್ತಾನೆ, ನಮಗೆ ಯಾಕೆ ಮೋಸ ಮಾಡುತ್ತೀರಿ" ಎಂದೆಲ್ಲ ಬಡಬಡಿಸುತ್ತಿದ್ದರು. ಆದರೆ ಅದನ್ನು ಯಾರೂ ಲೆಕ್ಕಿಸದೆ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿದ್ದರು. ಆ ಮನುಷ್ಯನನ್ನು ನೋಡಿದಾಗ ನನಗೆ ಅಯ್ಯೋ ಪಾಪ ಎನ್ನಿಸಿತು. ಅವರು ಯಾರೋ ಏನೋ, ನೋಡಿಕೊಳ್ಳಲು ಜನ ಇದ್ದರೋ ಇಲ್ಲವೋ, ನೋಡಲು ಸಂಭಾವಿತರಂತೆ ಕಾಣುತ್ತಾರೆ ಎಂದು ಮರುಕವಾಯಿತು. ಇನ್ನೊಮ್ಮೆ ಅದೇ ಮಳಿಗೆಗೆ ಹೋದಾಗ ಅವರು ಅಲ್ಲಿಯೇ ತಮ್ಮ ಪಾಡಿಗೆ ತಾವು ಕುಳಿತಿದ್ದರು. ತಮ್ಮಲ್ಲಿಯೇ ಏನೋ ಮಾತನಾಡಿಕೊಳ್ಳುತ್ತಿದ್ದರು. ಅಂಗಡಿಗಳು ಮುಚ್ಚುವ ವೇಳೆ ಆಗುತ್ತಾ ಬಂದಿತ್ತು. ಇವರು ಎಲ್ಲಿ ಹೋಗುತ್ತಾರೋ ನೋಡಬೇಕು ಎಂದು ಕುತೂಹಲದಿಂದ ಅಂಗಡಿ ಮುಚ್ಚುವವರೆಗೂ ಅಲ್ಲಿಯೇ ವ್ಯಾಪಾರ ಮಾಡುವನಂತೆ ನಟಿಸುತ್ತಾ ಕಾಯುತ್ತಿದ್ದೆ. ಆಗ ಸ್ಕೂಟರಿನಲ್ಲಿ ಒಬ್ಬರು ಬಂದರು. ಬಂದವರೇ "ಅಪ್ಪಾ, ನಡಿ, ಮನೆಗೆ ಹೋಗೋಣಾ" ಎಂದು ಅವರನ್ನು ಕರೆದರು. ಆ ಮನುಷ್ಯನನ್ನು ನಾನು ಎಲ್ಲೋ ನೋಡಿದ್ದೇನೆ ಎನ್ನಿಸಿತು. ಅವರು ಇನ್ನೇನು ಹೊರಟು ಬಿಡುತ್ತಾರೆ ಎನ್ನುವಾಗ, ಅವನು ನನ್ನ ಶಾಲಾದಿನದ ಸಹಪಾಠಿ ರಮೇಶ್ ಎಂದು ಅನ್ನಿಸಿತು. ಕೇಳಲೋ ಬೇಡವೋ ಎಂದು ಅನುಮಾನಿಸುತ್ತಲೇ, "ನೀವು ವಾಗ್ದೇವಿ ಶಾಲೆಯಲ್ಲಿ ಓದಿದ ರಮೇಶ್ ಅಲ್ಲವೇ" ಎಂದು ಕೇಳಿಯೇ ಬಿಟ್ಟೆ. ಆತ, "ಹೌದು, ನೀವು ಯಾರು" ಎಂದ. ನಾನು "ಗೊತ್ತಾಗಲಿಲ್ಲವೇನೋ, ನಿನ್ನ ಅಂದಿನ ಸಹಪಾಠಿ, ರಾಜೇಶ್" ಎಂದೆ. "ಅಯ್ಯೋ, ನೀನೇನೋ, ನನಗೆ ಗುರುತೇ ಸಿಗಲಿಲ್ಲ" ಎಂದು ತಂದೆ ರಾಮಸ್ವಾಮಿಯನ್ನು ಪರಿಚಯ ಮಾಡಿಸಿದ. ಅವರು ಚೆನ್ನಾಗಿಯೇ ಮಾತನಾಡಿದರು. ಅಷ್ಟರಲ್ಲಿಯೇ ಅವನ ವಿಳಾಸ, ಫೋನ್ ಎಲ್ಲವನ್ನೂ ಪಡೆದು "ಇನ್ನೊಮ್ಮೆ ಮಾತನಾಡೋಣ" ಎಂದು ಹೊರಟೆ.
ನನಗೆ ಇದೇನೋ ವಿಚಿತ್ರ ಎನ್ನಿಸಿತು. ಅವನ ತಂದೆ, ಅಂದು ಹುಚ್ಚರಂತೆ ಮಾತನಾಡುತ್ತದ್ದರು, ಒಮ್ಮೆ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು, ಈಗ ನೋಡಿದರೆ ಮಗನ ಜೊತೆ ಏನೂ ನಡೆದೇ ಇಲ್ಲ ಎಂಬಂತೆ ಹೊರಟಿದ್ದಾರೆ, ಏನೋ ಕುತೂಹಲಕರವಾಗಿದೆ, ಇದನ್ನು ಭೇದಿಸಬೇಕು ಎಂದುಕೊಂಡೆ. ಇದಾದ ಕೆಲವು ದಿನದಲ್ಲಿಯೇ ನನಗೆ ಹೊರಗಿನ ಓಡಾಟಗಳು ಬಂದು, ಊರಿಂದೂರಿಗೆ ತಿರುಗುತ್ತ ಎಲ್ಲವನ್ನೂ ಮರೆತೇ ಬಿಟ್ಟಿದ್ದೆ. ಆಮೇಲೆ ಒಂದು ದಿನ ಆ ಅಂಗಡಿ ಮಳಿಗೆಗೆ ಹೋದಾಗ ರಮೇಶನ ತಂದೆಯ ನೆನಪಾಯಿತು. ಆದರೆ ಅವರು ಅಲ್ಲೆಲ್ಲು ಕಾಣಿಸಲಿಲ್ಲ.
ನಂತರ ರಾತ್ರಿ ರಮೇಶನಿಗೆ ಫೋನ್ ಮಾಡಿದೆ. ಕೇಳಲೋ ಬೇಡವೋ ಎಂದುಕೊಂಡು, ಅವನ ತಂದೆಯ ಬಗ್ಗೆ ಕೇಳಿದೆ. ಆಗ ಅವನೇ "ನೀನು ಕೇಳಿದ್ದರಲ್ಲಿ ತಪ್ಪೇನಿಲ್ಲ, ನಾಳೆ ಸಂಜೆ ಮನೆಗೆ ಬಾ, ಎಲ್ಲವನ್ನೂ ಹೇಳುತ್ತೇನೆ" ಎಂದ. ಹಳೆಯ ಮಿತ್ರನನ್ನು ನೋಡಬಹುದು, ಕುತೂಹಲಕರವಾದ ಘಟನೆಯನ್ನು ಭೇದಿಸಬಹುದು ಎಂದುಕೊಂಡು, ಮರುದಿನ ರಮೇಶನ ಮನೆಗೆ ಹೋದೆ.
ರಮೇಶನ ತಂದೆ ರಾಮಸ್ವಾಮಿ ವೃತ್ತಿಯಿಂದ ಕಲಾವಿದರು. ಬಹಳ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರು. ಒಮ್ಮೆ ಅವರು ಬಿಡಿಸಿದ್ದ ಒಂದು ಸುಂದರ ಚಿತ್ರವನ್ನು ನೋಡಿದ ಹಿರಿಯ ಅಧಿಕಾರಿಯೊಬ್ಬರು, ಇದು "ಕಲಾ ರತ್ನ" ಪ್ರಶಸ್ತಿಗೆ ಅರ್ಹ, ನಾನೆ ಅದನ್ನು ಶಿಫಾರಸು ಮಾಡುತ್ತೇನೆ ಎಂದು ಹೇಳಿ, ರಮೇಶನಿಗೆ ಆ ಕಲಾಕೃತಿಯನ್ನು ತಮ್ಮ ಕಚೇರಿಗೆ ತಂದು ಕೊಡಲು ಹೇಳಿದರು. ಅದು ನಿಜವಾಗಿಯೂ ಪ್ರಶಸ್ತಿಗೆ ಅರ್ಹವಾಗಿತ್ತು. ಆ ಪ್ರಶಸ್ತಿಗೆ ಇತರೆ ಚಿತ್ರಗಳೂ ಬಂದಿದ್ದವು. ಆಯ್ಕೆಯ ಸಮಯ ಬಂದಾಗ ರಾಮಸ್ವಾಮಿಯವರನ್ನು ನೀವು ಎಲ್ಲಿಯವರು, ನಿಮ್ಮ ಜಾತಿ ಇತ್ಯಾದಿಗಳನ್ನು ಕೇಳಿದಾಗ, ಅವರು ಕಲಾವಿದರಿಗೆ ಯಾವ ಜಾತಿ, ನಾನು ಕಲಾವಿದನ ಜಾತಿ, ನನ್ನ ಜಾತಿ ಕಟ್ಟಿಕೊಂಡು ನಿಮಗೇನು ಎಂದು ಹರಿಹಾಯ್ದರು. ಮಾತಿಗೆ ಮಾತು ಬೆಳೆದು, ರಾಮಸ್ವಾಮಿಯವರ ಚಿತ್ರ ಎಲ್ಲ ರೀತಿಯಿಂದ ಅರ್ಹವಾಗಿದ್ದರೂ, ಬೇರೆ ಏನೇನೋ ಕಾರಣಗಳಿಂದ, ರಾಮಸ್ವಾಮಿಯವರಿಗೆ, ಕೊಬ್ಬು, ತಲೆ ಭಾರ ಎಂದು ಬಿಂಬಿಸಿ ಪ್ರಶಸ್ತಿಯನ್ನು ತಪ್ಪಿಸಿದರು. ಇದು ರಾಮಸ್ವಾಮಿಯವರನ್ನು ಕೆರಳಿಸಿತು. ಅಂದಿನಿಂದ ಅವರು ಮೊದಲಿನ ರಾಮಸ್ವಾಮಿ ಆಗಿರಲಿಲ್ಲ. ಆಗಾಗ್ಗೆ ಕೆರಳಿ ಹೀಗೆ ಏನೇನೋ ಬಡಬಡಿಸುತ್ತಿದ್ದರು. ಇದು ಮನೆಯಲ್ಲಿಯೂ ಹಿಂಸೆಯಾಗುತ್ತಿತ್ತು. ಹೆಂಡತಿ ಇದ್ದಿದ್ದರೆ ಅವರು ಸಮಾಧಾನ ಮಾಡುತ್ತಿದ್ದರೋ ಏನೋ, ಸೊಸೆ ಕೆಲಸಮಾಡುತ್ತಿದ್ದರಿಂದ ಅವರನ್ನು ಮೊದಲಿನಂತೆ ಮನೆಯಲ್ಲಿ ಬಿಡಲಾಗುತ್ತಿರಲಿಲ್ಲ. ಎಂದಿನಂತೆ ಮನೆಯಲ್ಲಿ ಬಿಟ್ಟು ಹೋಗಿದ್ದಾಗ, ಒಂದೆರೆಡು ಬಾರಿ ಯಾರಿಗೂ ಹೇಳದೆ ಮನೆಯನ್ನು ಹಾರು ಹೊಡೆದು ಎಲ್ಲಿಗೋ ಹೋದದ್ದೂ ಉಂಟು. ಇದರಿಂದಾಗಿ ರಮೇಶ, ತನ್ನ ಅತಿ ಹತ್ತಿರದ ಮಿತ್ರ, ಅಂಗಡಿ ಮಳಿಗೆಯ ಸಂಪತ್ ಬಳಿ ಬಿಟ್ಟು ಹೋಗುತ್ತಿದ್ದ. ಸಂಪತ್ ಅವರನ್ನು ಎಲ್ಲೂ ದೂರ ಹೋಗದಂತೆ ಕಣ್ಣಿಟ್ಟಿರುತ್ತಿದ್ದ. ರಮೇಶ್ ಕೊಟ್ಟ ಊಟ ತಿಂಡಿಗಳನ್ನು ಸಕಾಲಕ್ಕೆ ಒದಗಿಸುತ್ತಿದ್ದ.
"ಅದು ಸರಿ, ಈಗೆಲ್ಲಿ ಅವರು ಕಾಣುವುದೇ ಇಲ್ಲ" ಎಂದೆ. ಆಗ ರಮೇಶ್ ಅದು ಇನ್ನೊಂದು ಕತೆ ಎಂದ.
ಒಂದು ದಿನ ಸಂಪತ್ ಅವರ ಮಿತ್ರನ ಮಗುವೊಂದು ಅವರ ಅಂಗಡಿ ಮಳಿಗೆಯಲ್ಲಿ ಒಂದು ಸ್ಕೆಚ್ ಪ್ಯಾಡ್ ಹಾಗೂ ಬಣ್ಣದ ಪೆನ್ಸಿಲ್ಗಳನ್ನು ಕೊಂಡು ಹೋಗುತ್ತಿತ್ತು. ಏನೋ ಕಾರಣಕ್ಕೆ ಎಡವಿ ರಾಮಸ್ವಾಮಿಯವರ ಬಳಿ ಬಿದ್ದು ಬಿಟ್ಟಿತು. ಅವರು ಕೂಡಲೇ ಆ ಮಗುವನ್ನು ಸಮಾಧಾನಿಸಿ ಎತ್ತಿ ಕೂಡಿಸಿದರು. ಅದನ್ನು ಸಮಾಧಾನಿಸಲು, ಇವೆಲ್ಲ ಏನು, ಯಾಕೆ ಕೊಂಡು ಹೋಗುತ್ತಿದ್ದಿ? ಎಂದು ಕೇಳಿದರು. ಆ ಮಗು "ನಾನು ನಾಳೆ ಶಾಲೆಗೆ ಚಿತ್ರ ಬರೆದುಕೊಂಡು ಹೋಗಬೇಕು, ಈಗ ಕೈಗೆ ಗಾಯವಾಗಿದೆ, ಬರೆಯಲು ಆಗುವುದೇ ಇಲ್ಲ, ನಾನು ಏನು ಮಾಡಲಿ" ಎಂದು ಅಳತೊಡಗಿತು. ಆಗ ರಾಮಸ್ವಾಮಿ ಅವರು ನೀನು ಏನೂ ಯೋಚಿಸಬೇಡ, ನಾನು ಸಹಾಯ ಮಾಡುತ್ತೇನೆ, ಇಲ್ಲೇ ಕುಳಿತುಕೋ, ಚಿತ್ರವನ್ನು ಬಿಡಿಸಿಕೊಡುತ್ತೇನೆ" ಎಂದು ಅದರೆದುರೇ, ಅದಕ್ಕೆ ಬೇಕಾದ ಒಂದು ಸುಂದರವಾದ ಚಿತ್ರ ಬಿಡಿಸ ತೊಡಗಿದರು. ಆ ವೇಳೆಗೆ ಸಂಪತ್ ಇದನ್ನು ಗಮನಿಸಿ ಆ ಮಗುವಿನ ಮನೆಗೆ ವಿಷಯ ತಿಳಿಸಿದ. ಮಗುವಿನ ಅಪ್ಪ ಅಮ್ಮ, ಸಂಪತ್ ಎಲ್ಲರೂ ರಾಮಸ್ವಾಮಿಯವರ ಕೈಚಳಕವನ್ನು ಗಮನಿಸಿದರು. ಮಗು ತನಗಾದ ಗಾಯವನ್ನು ಮರೆತು, ರಾಮಸ್ವಾಮಿಯವರಿಗೆ "ತಾತ ನೀವೆಷ್ಟು ಒಳ್ಳೆಯವರು, ಇದು ನನಗೆ ಇಷ್ಟ, ನಾನು ಇದನ್ನು ಶಾಲೆಗೆ ಕೊಡುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ, ಬೈದರೂ ಪರವಾಗಿಲ್ಲ" ಎಂದು ಪ್ರಶಸ್ತಿ ಪತ್ರ ಕೊಟ್ಟು ಹೊರಟಿತು. ರಾಮಸ್ವಾಮಿಯವರ ಕಣ್ಣು ಮಂಜಾಯಿತು.
ಆಗ ಸಂಪತ್, "ಮಗುವಿನ ತಂದೆ ತಾಯಿಯರಿಗೆ ನೀವೇನೂ ಮಾತನಾಡಬೇಡಿ ನಾನು ಅವರೊಂದಿಗೆ ಮಾತನಾಡುತ್ತೇನೆ" ಎಂದು ಸೂಕ್ಷ್ಮ ಮನಸಿನ ರಾಮಸ್ವಾಮಿಯವರ ವಿಷಯವನ್ನು ಕೂಲಂಕಷವಾಗಿ ಅವರಿಗೆ ತಿಳಿ ಹೇಳಿ ಬಿಳ್ಕೊಟ್ಟರು.
ಇದಾದ ಮೇಲೆ ಆ ಮಗು, ಕಲಾ "ತಾತ, ತಾತ" ಎಂದು ರಾಮಸ್ವಾಮಿಯವರನ್ನು ಹಚ್ಚಿಕೊಂಡು ಅವರಿಂದ ಆಗಾಗ್ಗೆ ಚಿತ್ರಗಳನ್ನು ಬರೆಸಿಕೊಂಡು ಹೋಗುತ್ತಿತ್ತು. ಆಗ ಸಂಪತ್, ರಾಮಸ್ವಾಮಿಯವರಿಗೆ ಅಂಗಡಿಯೊಳಗೆ ಒಂದು ಕೋಣೆಯೊಳಗೆ ಕುಳಿತು ಚಿತ್ರ ಬಿಡಿಸಲು ಅನುವು ಮಾಡಿಕೊಟ್ಟರು. ಇದು ಹಲವಾರು ದಿನ ನಡೆಯಿತು. ಒಂದು ದಿನ ಆ ಮಗುವಿನ ತಂದೆ ಸುಂದರೇಶ್, "ರಾಮಸ್ವಾಮಿಯವರು ಬರೆದ ಎಲ್ಲಾ ಚಿತ್ರಗಳಿಗೂ ಚೌಕಟ್ಟು ಹಾಕಿಸಿದ್ದೇನೆ, ಅವುಗಳನ್ನು ಒಂದು ಕಲಾ ಮಳಿಗೆಯಲ್ಲಿ ಇಟ್ಟು ಅದರಿಂದ ಬಂದ ಹಣವನ್ನು ರಾಮಸ್ವಾಮಿಯವರಿಗೆ ಕೊಡುವೆ" ಎಂದರು. ಆಗ ಸಂಪತ್ "ಆ ಮಳಿಗೆ ನಮ್ಮ ಅಂಗಡಿ ಮಳಿಗೆಯಲ್ಲೇ ಆಗಲಿ, ನಾನು ಜಾಗ ಮಾಡಿಕೊಡುತ್ತೇನೆ" ಎಂದರು.
ಹೀಗೆ "ರಾಂ ಸ್ವಾಮಿ ಕಲಾ ಮಳಿಗೆ"ತಲೆ ಎತ್ತಿ ನನ್ನ ತಂದೆ ರಾಮಸ್ವಾಮಿಯವರನ್ನು ಮೊದಲಿನಂತೆ ಮಾಡಿದೆ ಎಂದ ರಮೇಶ್.
"ರಾಂ ಸ್ವಾಮಿ ಕಲಾ ಮಳಿಗೆ"ಯ ರಾಮಸ್ವಾಮಿಯವರು ಜಾತಿಯ ಬಗ್ಗೆ ಮೊದಲಿನಂತೆ ಈಗ ಬಡಬಡಿಸುವುದಿಲ್ಲ. ನಾನು ಹೇಳುವುದಿಷ್ಟೇ ಎನ್ನುತ್ತಾ " ಜಾತಿ ಎಂಬುದು ಹುಟ್ಟಿನಿಂದ ಬರುವುದಿಲ್ಲ, ಅವರು ಮಾಡುವ ಕೆಲಸದಿಂದ ಬರುತ್ತದೆ, ತಂದೆ ಡಾಕ್ಟರಾದ ಮಾತ್ರಕ್ಕೆ ಮಗ ವೈದ್ಯನಾಗಲು ಸಾಧ್ಯವೇ, ಲಾಯರ್ ಮಗ ಡಾಕ್ಟರ್ ಆಗಬಹುದಲ್ಲ, ರೈತನ ಮಗ ಉಪಾಧ್ಯಾಯ ಆಗಬಲ್ಲ, ಡಾಕ್ಟರ ಮಗ ಕಲಾವಿದ ಆಗಬಹುದಲ್ಲವೇ" ಎಂದು ಸಮಾಧಾನವಾಗಿ ಹೇಳುತ್ತಾರೆ. "ಜಾತಿ ಬೇಕಿರುವುದು ನಮಗಲ್ಲ, ವೋಟು ಕೇಳುವ ರಾಜಕಾರಣಿಗಳಿಗೆ, ಅವರು ಜಾತಿಗಳು ನಿರ್ಮೂಲನ ಆಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾರೆ" ಎಂದು ಹೇಳುತ್ತಾರೆ. "ಇನ್ನುಮುಂದಾದರೂ ಈ ಜಾತಿ ಪದ್ಧತಿ ನಿಧಾನವಾಗಿ ನಿರ್ಮೂಲನವಾದರೆ ಎಲ್ಲರಿಗೂ ಒಳಿತು, ಹುಟ್ಟಿನಿಂದ ಜಾತಿ ಎಂಬುದನ್ನು ಮೊದಲು ತೆಗೆಯಬೇಕು" ಎನ್ನುತ್ತಾರೆ. ಯಾರೋ ನಿಮ್ಮ ಜಾತಿ ಯಾವುದು ಎಂದಾಗ "ನನ್ನದು ಕಲಾವಿದನ ಜಾತಿ, ನನ್ನ ಮಗ ಇಂಜಿನೀರ್ ಜಾತಿ, ಸೊಸೆ ಕಾರ್ಮಿಕ ಜಾತಿ, ಮೊಮ್ಮಗುವಿನ ಜಾತಿ ನಿರ್ಧಾರ ಆಗಿಲ್ಲ ಎನ್ನುತ್ತಾರೆ.
ತಾತ ಮತ್ತು ಕಲಾ ಜೋಡಿಯ ಸಂಬಂಧ ದಿನೇದಿನೇ ಬೆಳೆದು ಬಿಡಿಸಲಾಗದ ನಂಟಾಗಿದೆ.
ಬಿ ಎಸ್ ಜಗದೀಶ ಚಂದ್ರ
No comments:
Post a Comment