Sunday, December 27, 2020

Badukidenu Badukidenu - Shri Kanakadasa - Raga Kaanada



ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು//
ಹರಿತೀರ್ಥ ಪ್ರಸಾದ ಎನ್ನ ಜಿಹ್ವೆಗೊದಗಿತು 
ಹರಿಯ ನಾಮಾಮೃತ ಕಿವಿಗೊದಗಿತು
ಹರಿಯ ದಾಸರು ಎನ್ನ ಬಂಧು ಬಳಗವಾದರು 
ಹರಿಯ ಶ್ರೀಮುದ್ರೆ ಆಭರಣವಾಯ್ತು ||1||
ಮುಕುತರಾದರು ಎನ್ನ ನೂರೊಂದು ಕುಲದವರು
ಮುಕುತಿ ಮಾರ್ಗಕೆ ಯೋಗ್ಯ ನಾನಾದೆನೊ
ಅಕಳಂಕ ಶ್ರೀಹರಿ ಭಕುತಿಗೆನ್ನ ಮನ ಬೆಳೆದು 
ರುಕುಮಿಣಿಯರಸ ಕೈವಶನಾದನೆನಗೆ ||2||
ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು 
ಮುಂದೆನ್ನ ಜನ್ಮ ಸಫಲವಾಯಿತು
ತಂದೆ ಶ್ರೀ ಕಾಗಿನೆಲೆಯಾದಿಕೇಶವರಾಯ
ಬಂದೆನ್ನ ಹೃದಯದಲಿ ನೆಲೆಯಾಗಿ ನಿಂತ ||3||

Wednesday, December 16, 2020

ಕಾಣಿಕೆ - ಕವನ

 

ಕಾಣಿಕೆ

 

ಇಂದಿನ ನಮ್ಮ ಈ ಸ್ಥಿತಿಗೆ                     ಹಿಂದಿನ ಜನಗಳೆ ಕಾರಣರು 

ಮುಂದಿನ ಜನಗಳ ದುಸ್ಥಿತಿಗೆ              ಇಂದಿನ ನಾವೇ ಕಾರಣರು 

 

ಅಂಗಳ ಸ್ವಚ್ಛ ಮಾಡುವರು                ರಸ್ತೆಗೆ ಕಸವನ್ನು ಎಸೆಯುವರು

ಮನೆಗಳ ಗೋಡೆಯ ಬೆಳಗುವರು          ರಸ್ತೆಯ ಗೋಡೆಯ ಕೆಡಿಸುವರು  

 

ನೋಟನು ದೇವರು ಎನ್ನುವರು        ಮುದಿರಿಸಿ ಮಸಿಯಲಿ ಬರೆದಿಹರು

ಗಿಡ ಮರ ದೇವರು ಎನ್ನುವರು            ಕಾಡನು ನಾಶ ಮಾಡಿಹರು 

 

ನೀರಿಗೆ ಬಾಗಿನ ನೀಡುವರು                  ಕಲುಷಿತ ಕಲ್ಮಶ ಮಾಡುವರು

ಮಳೆ ಬರಲೆಂದು ಬೇಡುವರು              ಕಾಡನು ನಾಶ ಮಾಡುವರು

 

ಮಕ್ಕಳೇ ದೇವರು ಎನ್ನುವರು               ಬೇಧಧ ಭಾವವ ಬೆಳೆಸುವರು

ಹಸುವಿನ ಹಾಲನು ಕುಡಿಯುವರು     ಹಸುವನೆ ಕಡಿದು ತಿನ್ನುವರು

 

ಇಂದಿನ ಮಕ್ಕಳು ಬೆಳೆಯುವರು       ನಾಳಿನ ಪ್ರಜೆಗಳು ಆಗುವರು

ಒಳ್ಳೆಯ ಕೆಲಸವ ಮೆಚ್ಚುವರು        ತಪ್ಪಿನ ಕೆಲಸಕೆ ಚುಚ್ಚುವರು 

 

 


Monday, December 14, 2020

ಆಂತರ್ಯದಕಾಂತಿ

 

ಆಂತರ್ಯದಕಾಂತಿ

 

ರತ್ನಹಾರ ಕೊರಳಿಗೇರಿ ಚೆಲುವ ತಂದಿದೆ 

ಕೊರಳಿನಿಂದ ಮಧುರ ವಾಣಿ ಇಂಪ ತಂದಿದೆ 

ಕೊರಳಿನಿಂದ ಮಧುರ ವಾಣಿ ಇಂಪ ತಂದಿದೆ //ರತ್ನ//


ಬಳೆಯು ಚಿನ್ನವಾಗಿ ಕೈಗೆ ಸೊಬಗ ನೀಡಿದೆ 

ಕೈಯ ಮುದ್ದು ಬರೆಹ ಪುಟವ ಚಿನ್ನಮಾಡಿದೆ 

ಸಹಾಯ ಹಸ್ತ ಕರಗಳಿಗೆ ಕಡಗ ತೊಡಿಸಿದೆ  

ಸಹಾಯ ಹಸ್ತ ಕರಗಳಿಗೆ ಕಡಗ ತೊಡಿಸಿದೆ  //ರತ್ನ//

 

ಮೈ ಸುಗಂಧ ಕಂಪ ಚೆಲ್ಲಿ ಹಿತವ ತಂದಿದೆ 

ವಿನಯವೇ ಸುಗಂಧವಾಗಿ ಮೇರೆ ಮೀರಿದೆ 

ವಿದ್ಯೆ ಶೃಂಗಾರವಾಗಿ ಶೋಭೆ ತಂದಿದೆ 

ವಿದ್ಯೆ ಶೃಂಗಾರವಾಗಿ ಶೋಭೆ ತಂದಿದೆ  //ರತ್ನ//


ಚಿನ್ನ ರತ್ನ ಹೂ ಸುಗಂಧ ಬಾಹ್ಯ ಬೆಳಗಿದೆ 

ಸುಜನ ಸಂಗ  ವಿದ್ಯೆ ವಿನಯ ಆಂತರ್ಯ ಬೆಳಗಿ 

ಮನಕೆ ಶಾಂತಿ ನೀಡಿ  ಸುಗುಣ ಕಾಂತಿ ಚಿಮ್ಮಿದೆ 

ಜಗದ ಒಡೆಯನಭಯ ಹಸ್ತ ಹಿಂದೆ ಅಡಗಿದೆ  //ರತ್ನ//

 


ಸಾಧನೆಯ ಕಥೆ - ಕರೋನ, ಆನ್ ಲೈನ್ ತರಗತಿಗಳು ಮತ್ತು ಹೊಸ ಶಾಲೆ

ಕರೋನ, ಆನ್ ಲೈನ್ ತರಗತಿಗಳು ಮತ್ತು ಹೊಸ ಶಾಲೆ 

ಕರುಣಾ ಈಗ ಮನೆಯಲ್ಲೇ ಕುಳಿತು ಕಚೇರಿಯ ಕೆಲಸ ಮಾಡುತ್ತಿದ್ದಳು. ಅವಳ ಗಂಡ ಹರೀಶ್ ಸಹಾ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಅವರ ಮಗಳು ಕರೀನಾ ಮತ್ತು ಮಗ ಹೃತಿಕ್  ಸಹಾ ಈಗ ಮನೆಯಲ್ಲೇ. ಮೊದಮೊದಲು ಎಲ್ಲರೂ ಸಂತೋಷವಾಗಿ ಕಾಲ ಕಳೆಯುತ್ತಿದ್ದರು. ಆದರೆ ಈಗ ಕರೀನಾಳಿಗೆ, ಹೃತಿಕ್ ಗೆ ಎಲ್ಲಾ ಪಾಠಗಳೂ ಮನೆಯಲ್ಲೇ ನಡೆಯುತ್ತಿರುವುದರಿಂದ ಕರುಣಾಳಿಗೆ ತನ್ನ ಕೆಲಸಗಳಿಗಿಂತ ಅವರಿಬ್ಬರನ್ನು ನೋಡಿಕೊಳ್ಳುವುದೇ ಒಂದು ಕೆಲಸವಾಗಿ ಬಿಟ್ಟಿದೆ. ಆನ್ಲೈನ್ ನೆಪದಲ್ಲಿ ಅವರು ಇನ್ನೆಲ್ಲಿ ಬೇರೆ ಏನನ್ನೋ ನೋಡಿಕೊಂಡು ಹಾಳಾಗಿ ಬಿಡುತ್ತಾರೋ ಎಂಬ ಭಯ ಬೇರೆ. ಹರೀಶನಿಗೆ ಕೆಲಸ ಹೆಚ್ಚು, ಜವಾಬ್ದಾರಿ ಹೆಚ್ಚು, ಹೀಗಾಗಿ ಮಕ್ಕಳ ಕಡೆ ಗಮನ ಕೊಡಲು ಆಗುತ್ತಿಲ್ಲ. ಕರುಣಾಳಿಗಂತೂ ಕಚೇರಿಯ ಕೆಲಸ, ಮನೆಯ ಕೆಲಸ, ಮಕ್ಕಳ ಜವಾಬ್ದಾರಿ ಎಲ್ಲವೂ ಸೇರಿ ಹುಚ್ಚು ಹಿಡಿಯುವುದೊಂದು ಬಾಕಿ. ವಿಪರೀತ ಒತ್ತಡದಿಂದಾಗಿ ಒಮ್ಮೊಮ್ಮೆ ಆರೋಗ್ಯವೂ ಹಾಳಾಗುತ್ತಿತ್ತು. ಕಡೆಗೆ ಕರುಣಾ ಗಂಡನಿಗೆ, ರೀ ಇನ್ನು ಮೇಲೆ ನಾನು ಕೆಲಸಕ್ಕೆ ಹೋಗುವುದಿಲ್ಲ, ಈ ಒತ್ತಡ ತಡೆಯಲು ನನಗೆ ಸಾಧ್ಯವಿಲ್ಲ. ನಾನು ಮಕ್ಕಳನ್ನು ನೋಡಿಕೊಳ್ಳುತ್ತ ಅಡುಗೆ ಕೆಲಸ ಮಾಡುತ್ತೇನೆ ಎಂದಳು. ಹರೀಶನೂ ಅವಳ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಒಪ್ಪಿಗೆ ಕೊಟ್ಟನು. 

ಕರುಣಾ ಅಕ್ಕಪಕ್ಕದವರ ಮನೆಯಲ್ಲಿ ಈ ಆನ್ಲೈನ್ ಪಾಠಗಳ ಬಗ್ಗೆ ವಿಚಾರಿಸಿದಾಗ ಎಲ್ಲರ ಮನೆಯಲ್ಲೂ ಇದೆ ಗೋಳಾಗಿತ್ತು. ಕರುಣಾ ಚುರುಕು ಬುದ್ದಿಯ ವಳು. ಇದಕ್ಕೆ ಏನಾದರೂ ಒಂದು ಉಪಾಯ ಮಾಡಬೇಕೆಂದು ಯೋಚಿಸಿದಳು. ಮಕ್ಕಳಿಗೆ ಪಾಠ ಆಗಬೇಕು, ಆದರೆ ಪರೀಕ್ಷೆಗೆ ತೊಂದರೆ ಆಗಬಾರದು, ಇದಕ್ಕೆ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿದಳು. 

ಮೊದಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಗೆ ಹೋಗಿ ಅದರ ಸಿಲಬಸ್ ಎಲ್ಲವನ್ನು ನೋಡಿದಳು. ನಂತರ ತನ್ನ ಮಕ್ಕಳನ್ನು ಅದರ ಮೂಲಕ ಓದಿಸಬಹುದೇ ಎಂದು ವಿಚಾರಿಸಿದಳು. ಅದು ಭಾರತ ಸರ್ಕಾರದ ಎಚ್ ಆರ್ ಡಿಪಾರ್ಟ್ಮೆಂಟ್ ನಿಂದ ಅಂಗೀಕೃತವಾದ ಒಂದು ಆಟಾನಮಸ್ ಸಂಸ್ಥೆ ಎಂದು ಗೊತ್ತಾಯಿತು. ಅದರ ಮೂಲಕ ಪರೀಕ್ಷೆ ತೊಗೊಂಡವರು ಸಿ ಬಿ ಎಸ್ ಸಿ ಪರೀಕ್ಷೆ ತೆಗೆದುಕೊಂಡಷ್ಟೇ ಸಮ, ಮುಂದೆ ಓದಲು ಎಲ್ಲೂ ತೊಂದರೆ ಆಗುವುದಿಲ್ಲ ಎಂದು ಅವರು ಹೇಳಿದರು. ಈಗ ಕರುಣಾ ಮನೆಗೆ ಬಂದು ತನ್ನ ಮಕ್ಕಳ ಶಾಲೆಯನ್ನು ಬಿಡಿಸಿ ಇಬ್ಬರಿಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ ಓದಿಸಲು ಎಲ್ಲಾ ಏರ್ಪಾಟು ಮಾಡಿದಳು. 

ಅವಳೊಂದಿಗೆ, ಎಲ್ಲವನ್ನು ಅಳೆದು ಸುರಿದು ವಿಚಾರಿಸಿ ಹತ್ತಿರದಲ್ಲೇ ಇದ್ದ ಪಂಕಜ ಅವರೂ ತಮ್ಮ ಮಕ್ಕಳನ್ನು ಹಾಗೆಯೆ ಓದಿಸಲು ನಿರ್ಧರಿಸಿದರು. ಈಗ ಕರುಣಾ ತನ್ನ ಮನೆಯಲ್ಲಿಯೇ ಒಂದು ಬೇರೆ ಕೋಣೆಯಲ್ಲಿ ಮಕ್ಕಳಿಗೆ ಒಂದು ಪುಟ್ಟ ಶಾಲೆ ತೆರೆದಳು. ತನ್ನ ಎರಡು ಹಾಗೂ ಪಂಕಜಾ ಅವರ ಎರಡು ಮಕ್ಕಳು ಅವಳ ಶಿಷ್ಯರಾದರು. ಮನೆಯಲ್ಲೇ ಆಟ  ಊಟ, ಪಾಠ ಎಲ್ಲವೂ ನಡೆದು ಎಲ್ಲರಿಗೂ ಕರುಣಾಳ ಲ್ಲಿ ಹುದುಗಿದ್ದ ಅದ್ಯಾಪಕಿಯ ಮೇಲ್ವಿಚಾರಣೆ ಇತ್ತು. ಹೀಗಾಗಿ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿದರು. ಇದನ್ನು ಕಂಡ ಇನ್ನೂ ಕೆಲವರೂ ತಮ್ಮ ಮಕ್ಕಳನ್ನು ಕರುಣಾಳ ಬಳಿ ತಂದು ಬಿಟ್ಟರು. 

ಈಗ ಕರುಣಾ ತನ್ನಂತೆ ಪಾಠ ಮಾಡಲು ಇಷ್ಟವಿರುವ ಇನ್ನೂ ನಾಲ್ಕು ಅದ್ಯಾಪಕಿಯರನ್ನು ಗೊತ್ತು ಮಾಡಿಕೊಂಡು ಒಂದು ಪುಟ್ಟ ಮನೆಯಲ್ಲಿ ಪಾಠ ಹೇಳಿಕೊಡಲು ಅನುವು ಮಾಡಿಕೊಂಡಿದ್ದಾಳೆ. ಒಬ್ಬೊಬ್ಬ ಅದ್ಯಾಪಕಿಗೂ ೧೦ ಮಕ್ಕಳಂತೆ ಈಗ ಅಲ್ಲಿ ೫೦ ಮಂದಿ ಹುಡುಗರಿದ್ದಾರೆ. ಇಲ್ಲಿ ಮನೆ ಪಾಠ ವಿಲ್ಲ, ಡೊನೇಷನ್ ಇಲ್ಲ, ಅದ್ಯಾಪಕಿಯರ ಪ್ರೀತಿಯ ಕಣ್ಗಾವಲಿನಲ್ಲಿ ಮಕ್ಕಳು ಆಟ ಪಾಠ ಎಲ್ಲವನ್ನು ಕಲಿಯುತ್ತಿದ್ದಾರೆ. ಇದನ್ನು ಕರ್ನಾಟಕದ ಮೂಲೆಮೂಲೆಗೂ ವಿಸ್ತರಿಸಬೇಕು ಎಂಬುದು ಕರುಣಾಳ ಕನಸು. ಕರೋನ ಬಂದದ್ದು ತನ್ನ ಮಟ್ಟಿಗೆ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಎಂದು ಕರುಣಾ ಹೇಳುತ್ತಾಳೆ.  ಈ ಕರೋನದಿಂದಾಗಿ ಅನೇಕರು ಇಂತಹ ಪುಟ್ಟ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿ ಈಗ ನಿಶ್ಚಿಂತೆಯಿಂದ ಇದ್ದಾರೆ. ಅನೇಕ ಜನ ಅದ್ಯಾಪಕಿಯರು ಇಂತಹ ಕೆಲಸದಿಂದ ಮನೆಯ ಬಳಿಯಲ್ಲೇ ತಮಗೆ ಇಷ್ಟವಾದ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತ 'ಇಂದಿನ ಉತ್ತಮ ಪ್ರಜೆಗಳೇ ಮುಂದಿನ ಭಾರತದ ಏಳಿಗೆಗೆ ಬುನಾದಿ' ಎಂಬುದನ್ನು ಸಾಕಾರಗೊಳಿಸಲು ಹೊರಟಿದ್ದಾರೆ. 

ಜಗದೀಶ ಚಂದ್ರ ಬಿ ಎಸ್ 



ನವ್ಯ ಲೋಕದ ಕನಸು

 ಕಲಾ ಚಾವಡಿಯ ಭಾವ  ಚಾವಡಿಗೆ ಇದೊಂದು ಕವನ 

ನವ್ಯ ಲೋಕದ ಕನಸು

 

ಹೊಸ ಜಗತ್ತ ಕನಸ ಕಂಡು       ನವ್ಯಲೋಕವ ಕಟ್ಟುವಾ

ದುಃಖ ದ್ವೇಶ  ದೂರ ಸರಿಸಿ      ಅಲ್ಲೆಎಲ್ಲ ನೆಲೆಸುವಾ

-

ಸೂರ್ಯಕಿರಣ ಬಿಸಿಯನಿತ್ತು         ಮನೆಗೆ ಹಿತವ ಕೊಡುವುದು 

ಚಂದ್ರಕಿರಣ ತಂಪ ನೀಡಿ        ಕಚುಕುಳಿಯನು ಕೊಡುವುದು

ಬೆಳಕು ನೆರಳು ಸಮದಿ ಬೆರೆತು        ಸರ್ವ ಸುಖವನೀವುದು

 -

ಬಣ್ಣ ಬಣ್ಣದ ಹಕ್ಕಿ ದನಿಯು       ಮನಕೆ ರಂಗನು ಹರಡಿದೆ

ಬಣ್ಣ ಬಣ್ಣದ ಹೂಗಳೆಲ್ಲವು       ಇಂಪು ಕಂಪನು ನೀಡಿದೆ

ಇಂದ್ರಛಾಪ ಜನರ  ನಡುವೆ         ಸೇತು ಬಂಧವಾಗಿದೆ

 -

ನವ್ಯಲೋಕದೆಲ್ಲ ಜನರ         ಕನಸು ನನಸು ಆಗಿದೆ 

ಜಾತಿಧರ್ಮ ಹಂಗಿಲ್ಲದೆ        ಪ್ರೀತಿ ಗೌರವ ಬೆರೆತಿದೆ 

ಜಗದೊಡೆಯನ ಮಮತೆ ಪ್ರೀತಿ     ಸದಾ ಕಾಲ ದೊರಕಿದೆ 

Tuesday, December 8, 2020

ನಗೆ ಬರಹ - ಸುಳ್ಳೇ ನಮ್ಮನೇ ದೇವರು

 ಸುಳ್ಳೇ ನಮ್ಮನೇ ದೇವರು 

ಇಂದು ಎಲ್ಲರೂ ಒಂದು ಮುಖ್ಯವಾದ ಡ್ರಾಯಿಂಗ್ ಕೊಡುವ ದಿನವಾಗಿತ್ತು. ಆದ್ದರಿಂದ ತರಗತಿಗೆ ಹೋದಕೂಡಲೇ, ಎಲ್ಲಿ ಇವತ್ತಿನ ಚಟುವಟಿಕೆ? ಇವತ್ತೇ ಕಡೇ ದಿನ ಅಂತ ಎರಡು ಮೂರೂ ಬಾರಿ ನಿಮಗೆಲ್ಲ ಸಂದೇಶ ಕಳಿಸಿದ್ದೆ, ಆದರೂ ಏಕೆ ತಂದಿಲ್ಲ? ಎಂದು ಕೇಳಿದೆ. ನಮ್ಮ ವಿದ್ಯಾರ್ಥಿಗಳೆಲ್ಲಾ ಸುಳ್ಳಪ್ಪನ ಪರಮ ಭಕ್ತರು. ಅವನನ್ನೇ ಮನೆ ದೇವರಾಗಿ ಮಾಡಿಕೊಂಡುಬಿಟ್ಟಿದ್ದಾರೆ. ಅವರ ಉತ್ತರಗಳನ್ನು ನೋಡಿ. 

ವಿಜು - ಸರ್ ನಿನ್ನೆ ನಮ್ಮ ಅಜ್ಜಿ ಹೋಗಿ ಬಿಟ್ಟರು, ಆದ್ದರಿಂದ ಮಾಡಲೇ ಆಗಲಿಲ್ಲ. (ಇವನ ಮನೆಯಂತೂ ಸಾವಿನ ಮನೆ )

ಸರು - ಸರ್, ನನಗೆ ತುಂಬಾ ಜ್ವರ ಬಂದು ಬಿಟ್ಟಿತ್ತು. ಸ್ವಲ್ಪ ಕೆಮ್ಮುತ್ತ, ಇನ್ನು ಇದೆ ಸರ್, ಆದರೂ ತಪ್ಪಿಸಿಕೊಳ್ಳಬಾರದು ಎಂದು ಬಂದೆ ಸರ್. ನಾಳೆ ಕೊಟ್ಟುಬಿಡುತ್ತೀನಿ. (ಇದಂತೂ ಖಾಯಿಲೆಯ ಹುಡುಗಿ)

ವೆಂಕಿ - ಸರ್, ನಮ್ಮನೆ ನಾಯಿ ಹಾಳೆಗಳ ಮೇಲೆಲ್ಲಾ ಗಲೀಜು ಮಾಡಿ ಬಿಟ್ಟಿತು. ಈಗ ಹೊಸದು ಪ್ರಾರಂಭಿಸಿದ್ದೇನೆ. ನಾಳೆ ಕೊಟ್ಟುಬಿಡುವೆ ಸರ್. (ಇವನು ನಾಯಿ ಸಾಕಿಕೊಂಡಿರುವುದೇ ಇಂತಹ ಕೆಲಸಕ್ಕೆ)

ಸೀನ - ನಮ್ಮನೆಗೆ ನೆಂಟರು ಬಂದು ಬಿಟ್ಟಿದ್ದರು ಸರ್, ಮಾಡಕ್ಕೆ ಆಗಲೇ ಇಲ್ಲ. (ಇವರ ಮನೆ ಒಂದು ಗೆಸ್ಟ್ ಹೌಸ್ ಇದ್ದಂತೆ)

ಸಿರಿ - ಸರ್, ನಾನು ಎಲ್ಲ ಮಾಡಿ ಇನ್ನೇನು ಕೊಡಬೇಕು ಎಂದು ಕೊಂಡಿದ್ದೆ, ನಮ್ಮ ಮನೆಯ ಪಾಪು  ಹರಿದು ಹಾಕಿಬಿಟ್ಟಿತು ಸರ್. ಸ್ವಲ್ಪ ಸಮಯ ಕೊಡಿ ಸರ್, ಮಾಡಿ ಬಿಡುತ್ತೇನೆ. (ಇವನ ಮನೆಯ ಪಾಪು ಮಾಡುವ ಚೇಷ್ಟೆಗಳು ಒಂದೊಂದಲ್ಲ)

ಹರಿ - ದ್ವಿಚಕ್ರ ವಾಹನದಲ್ಲಿ ತರುತ್ತಿದ್ದೆ, ಗಾಳಿಗೆ ಹಾರಿ ಹೋಗಿ ಬಿಟ್ಟಿತು ಸರ್. ಗಾಡಿ ನಿಲ್ಲಿಸಿ, ಟ್ರಾಫಿಕ್ ಜಾಮ್ ಆಗಿ, ಪೊಲೀಸರಿಂದ ಬೈಸಿಕೊಂಡು ಹಾಗೆ ಬಂದು ಬಿಟ್ಟೆ. ಅದನ್ನು ತರಲು ಆಗಲೇ ಇಲ್ಲ ಸರ್. ಕ್ಷಮಿಸಿ. (ಇವನ ಡ್ರಾಯಿಂಗ್ ಹಾಳೆ ಒಂದು ಗಾಳಿ ಪಟ ಇದ್ದಂತೆ)

ಮೀನಾ - ಸರ್, ಎಲ್ಲಾ ಆಗಿದೆ. ಆದರೆ ತರುವುದನ್ನೇ ಮರೆತು ಬಿಟ್ಟೆ. ನಾಳೆ ತಂದು ಕೊಡುತ್ತೀನಿ. (ಪಾಪ ಆಗಲೇ ಮರೆವಿನ ಖಾಯಿಲೆ )

ವಿನು - ಯಾವುದೊ ಮುದುರಿದ ಡ್ರಾಯಿಂಗ್ ಹಾಳೆ ತೋರಿಸುತ್ತಾ, ನೋಡಿ ಚಕ್ರಕ್ಕೆ ಸಿಕ್ಕಿ ಹೇಗೆ ಆಗಿಬಿಟ್ಟಿದೆ. (ಮುದುಡಿದ ಡ್ರಾಯಿಂಗ್ ಹಾಳೆ ಯಾವಾಗ ಅರಳುವುದೋ ಕಾಣೆ)

ಬೆಟ್ಟಿ - ಅಳುತ್ತಾ, ಎಲ್ಲಾ ಮುಗಿಯುವುದರಲ್ಲಿತ್ತು, ಆದರೆ ನನ್ನ ಟಿ ಸ್ಕ್ವೇರ್ ಮುರಿದು ಹೋಯಿತು, ಅದಕ್ಕೆ ಮುಂದುವರೆಸಲು ಆಗಲೇ ಇಲ್ಲ. (ಮೊಸಳೆ ಕಣ್ಣೀರಿಗೆ ಒಳ್ಳೆಯ ಉದಾಹರಣೆ)

ಆನಿ - ಸರ್, ನೋಡಿ ನನ್ನ ಕೈಗೆ ಬ್ಯಾಂಡೇಜ್. ನಿನ್ನೆ ನಾನು ಬಿದ್ದು ಕೈ ಫ್ರಾಕ್ಚರ್ ಆಗಿ ಬಿಟ್ಟಿದೆ. ಹೇಗೆ ಸರ್ ಡ್ರಾಯಿಂಗ್ ಮಾಡುವುದು? (ಒಂದು ದಿನ ಡಾಕ್ಟರ್ ನ ಕರೆಸಿ ಇವನ ಕೈ ಪರೀಕ್ಷಿಸಬೇಕು)

ಬಿನ್ನಿ - ಸರ್, ಡ್ರಾಯಿಂಗ್ ಮಾಡುವಾಗ ಯಾರು ತೊಂದರೆ ಕೊಡಬಾರದು ಎಂದು ಬಾಗಿಲು ಹಾಕಲು ಹೋದೆ. ಆಗ ಬಾಗಿಲ ಸಂದಿಯಲ್ಲಿ ನನ್ನ ಬೆರಳು ಸಿಕ್ಕಿಹಾಕಿಕೊಂಡು ಜಜ್ಜಿ ಹೋಯಿತು. ನೋಡಿ ಇಲ್ಲಿ ಬ್ಯಾಂಡೇಜ್. ಹೀಗಾಗಿ ಮಾಡಲು ಆಗಲೇ ಇಲ್ಲ ಸರ್. (ಇವನ ಮನೆಯ ಬಾಗಿಲು ಸರಿಯಾದ ಬೆರಳನ್ನೇ ಹಿಡಿದು ಜಜ್ಜುತ್ತದೆ)

ಮೇರಿ - ಸರ್, ನಾನು ಎಲ್ಲವನ್ನು ಮುಗಿಸಿ, ಶಾರೀಗೆ ಕೊಡಲು ಹೇಳಿದ್ದೆ. ನೋಡಿ ಸರ್ ಅವಳು ಬಂದೇ ಇಲ್ಲ. ನಾನು ಬರಬಾರದು ಎಂದುಕೊಂಡು ಬಂದೆ, ಬರುತ್ತೇನೆ ಎಂದು ಅವಳು ಚಕ್ಕರ್. (ಹಾಗಲ ಕಾಯಿ, ಬೇವಿನ ಕಾಯಿ ಜೋಡಿ) 

ಜಯ - ಸರ್, ಹಾಳಾದ ಕೆ ಈ ಬಿ ಅವರು. ನಿನ್ನೆ ರಾತ್ರಿ ಪೂರ್ತಿ ನಮ್ಮ ಮನೆಯಲ್ಲಿ ಕರೆಂಟೇ ಇರಲಿಲ್ಲ. (ಕೆ ಈ ಬಿ ಅವರು ಇವಳ ಮನೆಯ ಮೇಲೆ ಕಣ್ಣಿಟ್ಟಿದ್ದಾರೆ)

ನಾನು "ಅಯ್ಯೋ ಪಾಪ, ನಿಮಗೆಲ್ಲ ಎಷ್ಟು ಕಷ್ಟ ಅಲ್ಲವೇ. ಸುಳ್ಳಪ್ಪನ ಆಣೆ, ನಿಮಗೆ ತೊಂದರೆ ಕೊಡುವುದಿಲ್ಲ. ಈಗ  ಏನೂ ಯೋಚಿಸಬೇಡಿ. ಇದು ಮೂರು ಘಂಟೆಯ ಅವಧಿಯ ತರಗತಿ. ಇಲ್ಲೇ ಕುಳಿತು ನಾನು ಕೊಡುವ ಈ ಹೊಸ ಕೆಲಸವನ್ನು ಮಾಡಿಕೊಟ್ಟು ಬಿಡಿ" ಎಂದೆ. 

ಮತ್ತೆ ಸುಳ್ಳಪ್ಪನ ಪರಮ ಭಕ್ತರು ಕೈ ನೋವು, ಕಾಲು ಉಳುಕಿದೆ, ತಲೆ ನೋವು, ಮೈಕೈ ನೋವು, ಎಂದು ನೆಪ ಹೇಳಿ ಚಾಪೆ ಕೆಳಗೆ ತೂರಿದರು. ಬ್ಯಾಂಡೇಜ್ ಹಾಕಿದವರಂತೂ ಖುಷಿಯಾಗಿದ್ದರು. 

ನಾನು ಮತ್ತೆ "ಅಯ್ಯೋ ಪಾಪ, ನಿಮಗೆಲ್ಲ ಎಷ್ಟು ಕಷ್ಟ ಅಲ್ಲವೇ. ಸುಳ್ಳಪ್ಪನ ಆಣೆ, ನಿಮಗೆ ತೊಂದರೆ ಕೊಡುವುದಿಲ್ಲ. ಈಗ  ಏನೂ ಯೋಚಿಸಬೇಡಿ" ಎಂದು, "ಈಗ ನಿಮಗೆಲ್ಲ ಒಬ್ಬೊಬ್ಬರನ್ನಾಗಿ ಕರೆದು ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ, ಉತ್ತರ ಹೇಳಿಬಿಡಿ. ಅದಕ್ಕೆ ಅಂಕಗಳನ್ನು ಕೊಡುತ್ತೇನೆ" ಎಂದು ರಂಗೋಲಿ ಕೆಳಗೆ ತೂರಿದೆ. 


Wednesday, December 2, 2020

Elu Narayanane Elu Lakshmiramana - Kanaka Dasa - Keyboard Music BSJC

ತಲ್ಲಣಸಿದಿರು ಕಂಡ್ಯ ತಾಳು ಮನವೆ / Tallanisadiru kanDya - Kanaka Dasaru - Key...

Baagilanu Theredu - Kanakadasaru - Hindola Raga - ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ


ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ - ಕನಕದಾಸರಿಗೆ ನಮನ 

ಮೂರ್ತಿ ಚಿಕ್ಕದಾದರೂ - ಪದ್ಯ


ಮೂರ್ತಿ ಚಿಕ್ಕದಾದರೂ 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂದು 

ಗೊತ್ತಿಲ್ಲವೇ ನಿಮಗೆ, ತೋರಿಸುವೆ ನಿಮಗೆ 

-

ಏ  ಸಣಕಲು ಕಡ್ಡಿ ನೀನೇನು ಸಾಧಿಸುವೆ 

ವ್ಯಂಗ್ಯದ ನುಡಿ ಕೇಳಿ ಸಾಧಿಸಿ ನಾ ತೋರಿಸುವೆ    /ಮೂರ್ತಿ/

-

ಬಾಳೆಂಬ ಕಡಿದಾದ ಬೆಟ್ಟವೇರಿ  ನಿಂತೆ 

ಸಂಕಟಗಳ ಭಾರವಾ ನಾ ಹೊತ್ತು ನಿಂತೆ    /ಮೂರ್ತಿ/

-

ಜಗದೊಡೆಯ ಸೂರ್ಯನ ನಾ ನಂಬಿ ನಿಂತೆ 

ಆ ವರವೇ ನನಗೆ  ಪ್ರಭಾವಳಿಯಂತೆ     /ಮೂರ್ತಿ/

- ಜಗದೀಶ ಚಂದ್ರ 

Tuesday, December 1, 2020

ಒಲವಿನ ಓಲೆ - ನಗೆ ಬರಹ

ಒಲವಿನ ಓಲೆ 

ನನ್ನ ದೊಡ್ಡಮ್ಮನ ಮಗಳು ಕುಸುಮ ಹೇಳಿದ ಕತೆ. ಅವಳು ನನಗಿಂತ ಸುಮಾರು ದೊಡ್ಡವಳು. ಇದನ್ನು ಹೇಳಿದಾಗ ಅವಳಿಗೆ ಸುಮಾರು ಹದಿನಾರು ವರ್ಷ ಇರಬಹುದು.  

ನಾನೊಂದು ಒಲವಿನ ಓಲೆ ಬರೆದಿದ್ದೆ. ಅದೆಷ್ಟು ಚೆನ್ನಾಗಿ ಬರೆದಿದ್ದೆ ಎಂದರೆ ಅವನೊಂದಿಗೆ ಈಗ ಮದುವೆಯಾಗಿ ನನಗೆ ಅದೆಷ್ಟು ಮಕ್ಕಳಿರುತ್ತಿದ್ದವೋ ಏನೋ ಎಂದಳು. ಏನೇ ಹಾಗಂದರೆ? ಎಂದೆ. ಅವನ ಮೇಲೆ ನನಗೆ ಅಷ್ಟೊಂದು ಪ್ರೀತಿ  ಇತ್ತು ಎಂದರ್ಥ, ಅಷ್ಟು ಗೊತ್ತಾಗಲ್ವಾ? ಎಂದು ಬೈದಳು. ನಾನು ಪೆದ್ದು ಪೆದ್ದಾಗಿ ಒಪ್ಪಿಕೊಂಡು ಸರಿ ಮುಂದೆ ಹೇಳು ಎಂದೆ. 

ನಾನು ಸಿನಿಮಾ ಹಾಡುಗಳ ಸಾಲುಗಳನ್ನೆಲ್ಲಾ ಸೇರಿಸಿ ಒಂದು ಮುದ್ದಾದ ಪತ್ರ ಬರೆದಿದ್ದೆ. ಹಾಡಲು ಬಂದಿದ್ದರೆ, ಅದನ್ನು ರೆಕಾರ್ಡ್ ಮಾಡುವ ಅನುಕೂಲ ಇದ್ದಿದ್ದರೆ ಆಹಾ ಅದೆಷ್ಟು ಚೆನ್ನಾಗಿರುತ್ತಿತ್ತೋ ಎಂದು ನಿಡುಸುಯ್ದಳು. ಯಾಕೇ ಏನಾಯ್ತು ? ಎಂದೆ. ನಿನ್ನ ಅಕ್ಕ ಇದ್ದಾಳಲ್ಲಾ ಸುಮತಿ, ಅವಳಿಂದ ಏನೇನೋ ಆಗಿ ಹೋಯಿತು ಎಂದಳು. ನಾನು ಯಾಕೆ ಅವಳು ಅವನಿಗೆ ಇನ್ನೂ ಚೆನ್ನಾಗಿರುವ ಪ್ರೇಮ ಪತ್ರ ಬರೆದಳಾ? ಎಂದೇ. ಕುಸುಮಾ ಗೆ ರೇಗಿ ಹೋಯಿತು. ಥು, ನಿನ್ನ ತಲೆ, ಅಲ್ಲವೋ ನಾನು ಒಲವಿನ ಓಲೆ ಬರೆದು ಅದಕ್ಕೆ ಅಂಚೆ ಕಚೇರಿಯ ಲಕೋಟೆ ತಂದು ಅದರಮೇಲೆ ವಿಳಾಸ ಬರೆಯಬೇಕಿತ್ತು. ನಿನ್ನ ಅಕ್ಕ ಸುಮತಿ ತುಂಬಾ ಮುದ್ದಾಗಿ ಬರೆಯುತ್ತಾಳೆ ಎಂದು ಅವಳಿಗೆ ವಿಳಾಸ ಬರೆ ಎಂದು ಕೊಟ್ಟೆ. ಎಲ್ಲಾ ಹಾಳು ಮಾಡಿ ಬಿಟ್ಟಳು. 

ಏನು ಮಾಡಿದಳು? ಎಂದು ಮುದ್ದು ಮುದ್ದಾಗಿ ಕೇಳಿದೆ. ಅಯ್ಯೋ ನಾನು ವಿಳಾಸ ಕೊಡುವುದನ್ನೇ ಮರೆತಿದ್ದೆ, ಅವಳು ನಮ್ಮ ಮನೆಯ ವಿಳಾಸವನ್ನೇ ಬರೆದು ಬಿಟ್ಟಿದ್ದಳು. ಅವಳಿಗೆ ಗೊತ್ತಿದ್ದುದು ಅದೊಂದೇ. ಅದು ನಮ್ಮ ಅಪ್ಪನ ಕೈಗೆ ಸೇರಿತು. ದೊಡ್ಡ ರಾದ್ಧಾಂತವೇ ಆಗುವುದರಲ್ಲಿತ್ತು. ಆಗ ನಾನು ಮೆಲ್ಲಗೆ 'ಶಾಲೆಯಲ್ಲಿ ಸಿನೆಮಾ ಹಾಡುಗಳನ್ನು ಸೇರಿಸಿ ಒಂದು ಪತ್ರ ಬರೆಯಿರಿ ಎಂದು ಹೇಳಿ ಅದರಲ್ಲಿ ವಿಳಾಸ, ಎಲ್ಲವನ್ನು ಬರೆಯಬೇಕು ಎಂದಿದ್ದರು. ನಾನು ಮನೆಯಲ್ಲಿದ್ದ ಅಂಚೆ ಕಚೇರಿಯ ಲಕೋಟೆಯಲ್ಲಿಟ್ಟು ಶಾಲೆಗೆ ಕೊಡಬೇಕಿಂದಿದ್ದೆ. ಈ ಕುಸುಮ ಕೈಯಲ್ಲಿ ಅದಕ್ಕೆ ವಿಳಾಸ ಬರೆಸಿದೆ. ಅವಳು ಅದಕ್ಕೆ ನಮ್ಮ ಮನೆಯ ವಿಳಾಸ ಬರೆದು ಅದನ್ನು ಪೋಸ್ಟ್ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು. ಅದೇ ಇದು ಎಂದು ಬೆದರುತ್ತಾ ಹೇಳಿದೆ. ಅದೇನನ್ನಿಸಿತೋ, ಮುಂಗೋಪಿ ಅಪ್ಪನಿಗೂ ನಗು ಬಂದು 'ಪರವಾಗಿಲ್ಲ ಚೆನ್ನಾಗಿದೆ ನಿನ್ನ ಕಲ್ಪನೆ" ಎಂದು ಹೊಗಳಿ ತಮ್ಮ ಬಳಿಯೇ ಇಟ್ಟುಕೊಂಡರು ಎಂದಳು. 

ಈಗ ಅವಳ ಒಲವಿನ ಓಲೆಯ ಕತೆಯನ್ನು ನೆನೆಸಿಕೊಂಡು ಬಿದ್ದು ಬಿದ್ದು ನಗುತ್ತೇವೆ. ನಾನು ನಿಮ್ಮ ಅಪ್ಪನ ಬಳಿ ಆ ಪತ್ರವನ್ನು ಹುಡುಕಿ ನಿನ್ನ ಗಂಡನಿಗೆ ಕೊಡುತ್ತೇನೆ ಎಂದರೆ, ಈ ಚಾಲಾಕಿ ಕುಸುಮ, ಕೊಡು, ಕೊಡು, ನಿಮಗೆಂದೇ ನಾನು ಆಗಲೇ ಈ ಪತ್ರ ಬರೆದಿದ್ದೆ ಎಂದು ಹೇಳಿ ಅವರಿಂದ ಕಿವಿಯ ಓಲೆಯನ್ನು ಗಿಟ್ಟಿಸುತ್ತೇನೆ ಎನ್ನುತ್ತಾಳೆ. 

ಒಲವಿನ ಓಲೆಯ ಕತೆ ಹೇಗಿದೆ?  -  ಜಗದೀಶ ಚಂದ್ರ 

 


ಕಥೆ - ಬೇಲಿ ಮೇಯ್ದ ಹೊಲ

ಬೇಲಿ ಮೇಯ್ದ ಹೊಲ

ವಾಣಿ ನೋವಿನಿಂದ ನರಳುತ್ತಿದ್ದಳು. ಜೊತೆಗೆ ಮಾತನಾಡಲೂ ಆಗುತ್ತಿಲ್ಲ. ಗಂಟಲಿಗೆ ಚುಚ್ಚಿದ ಮರದ ರೆಂಬೆ ಅವಳ ವಾಣಿಯನ್ನೇ ನಾಶ ಮಾಡಿಬಿಟ್ಟಿತ್ತು. ಅವಳಿಗೆ ಮುಖವಾಣಿ ಎಂದು ಎಲ್ಲರೂ ಕರೆಯುತ್ತಿದ್ದರು. ಅವಳ ಮಾತು ಎಷ್ಟು ಮೊನಚು ಎಂದರೆ ಮಾತಿನಲ್ಲೇ ಅವಳು ಕೊಂದುಬಿಡುತ್ತಿದ್ದಳು. ಇಂದು ಮೂಲಕ್ಕೆ ಕೊಡಲಿ ಪೆಟ್ಟು ಬಿದ್ದು ಅವಳಿಗೆ ಮುಂದೇನೋ ಎಂದು ಯೋಚನೆಯಾಗಿತ್ತು. ಇದುವರೆಗೂ ಅವಳ ಹಿಂದೆ ಸುತ್ತುತ್ತಿದ್ದ ಅವಳ ಗುಂಪಿನ ಸದಸ್ಯರಾರೂ ಇವಳನ್ನು ವಿಚಾರಿಸಿರಲಿಲ್ಲ. ಅವಳ ಗುರುಗಳ ಮಗ, ವಿಶ್ವ ಅರ್ಥಾತ್ ಅವಳ ಪ್ರಿಯತಮ ಪತ್ತೆಯೇ ಇರಲಿಲ್ಲ. 

ವಾಣಿ ತನ್ನ ಮಾತಿನ ಮೊನಚಿನಿಂದ ಗಮನ ಸೆಳೆದು ಗುರುಗಳ ಗಮನಕ್ಕೆ ಬಂದಿದ್ದಳು. ಅವರು ಅವಳನ್ನು ಕರೆದುಕೊಂಡು ಹೊಗಳಿ ಉಬ್ಬಿಸಿ ಅವಳಿಗೆ ಕ್ರಾಂತಿಕಾರಿ ತತ್ವಗಳನ್ನು ತುಂಬಿ ಬಿಟ್ಟಿದ್ದರು. ವಾಣಿ  ನಂಬಿದ್ದಳೋ ಇಲ್ಲವೋ, ಆದರೆ ಎಲ್ಲರ ಹೊಗಳಿಕೆಯಿಂದ ಉಬ್ಬಿ ಹೋಗಿ ಅವರು ಹೇಳಿದಂತೆ ಕುಣಿಯುತ್ತ ಅವರ ಮುಖವಾಣಿಯಾಗಿ ಬಿಟ್ಟಿದ್ದಳು. ಅವರು ಯಾರನ್ನಾದರೂ ಕೊಲೆ ಮಾಡು ಎಂದರು ಅದನ್ನೂ ಮಾಡುವಷ್ಟು ಪ್ರಭಾವಿತಳಾಗಿದ್ದಳು. ಇದಕ್ಕೆ ಸರಿಯಾಗಿ ಗುರುಗಳ ಮಗ ವಿಶ್ವ ನ ಮೋಹಕ್ಕೂ ಬಲಿಯಾಗಿದ್ದಳು. 

ಇಂದು ಪೋಲೀಸಿನವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಾಡಿನಲ್ಲಿ ರೆಂಬೆಯೊಂದರಿಂದ ಚುಚ್ಚಿಸಿಕೊಂಡು ಅಪಘಾತಕ್ಕೀಡಾಗಿದ್ದಳು. ಮಾತು ನಿಂತುಹೋಗಿದೆ ಎಂದು ತಿಳಿದಮೇಲೆ ಅವಳಿಗೆ ಮೊದಲಿನ ಉಪಚಾರ ಎಲ್ಲವೂ ನಿಂತುಹೋದವು. ವಿಶ್ವನಂತೂ ಇವಳನ್ನು ಅಪರಿಚಿತಳಂತೆ ನೋಡುತ್ತಿದ್ದ. ವಾಣಿಗೆ ಈಗ ಜ್ಞಾನೋದಯವಾಗತೊಡಗಿತು. ಇವರೆಲ್ಲರಿಗೂ ತಾನು ಬೇಕಿರಲಿಲ್ಲ, ತನ್ನ ಮೊನಚಾದ ವಾಣಿ ಬೇಕಿತ್ತು, ಇವರನ್ನು ನಾನು ನಂಬಿ ಮೋಸಹೋದೆನಲ್ಲ ಎಂದು ಮರುಗತೊಡಗಿದಳು. ಗುರುಗಳ ಬಳಿ ಹೋಗಿ ಮಾತನಾಡಬೇಕು ಎಂದುಕೊಂಡಳು. ಆದರೆ ಮಾತೇ ಇಲ್ಲ, ಬರೆದು ಹೇಳಬೇಕು ಎಂದು ತಾನು ಹೇಳಬೇಕೆಂದು ಕೊಂಡಿದ್ದುದನ್ನೆಲ್ಲ ಬರೆದು ಗೆಳತಿಯ ಸಹಾಯದಿಂದ ಗುರುಗಳ ಬಳಿಗೆ ಬಂದಳು. 

ಗುರುಗಳು ನಿರ್ಲಿಪ್ತರಾಗಿ ಅಲ್ಲಮ್ಮ, ಮಾತೇ ಆಡಲು ಆಗದ, ಕುಂಟಿಕೊಂಡು ಓಡಾಡುವ ನಿನ್ನಂತಹ ಹೆಂಗಸನ್ನು ಈ ಕಾಡಿನಲ್ಲಿ ಹೇಗಮ್ಮಾ ಕಾಪಾಡುವುದು? ಯಾರಾದರೂ ಪರಿಚಿತರ ಮನೆಗೆ ಹೋಗಿಬಿಡು ಎಂದರು. ಮಾತನಾಡದಿದ್ದರೇನಂತೆ, ಇತರರಂತೆ ನಾನೂ ಸಹ ಪಿಸ್ತೂಲನ್ನು ಉಪಯೋಗಿಸುತ್ತೇನೆ ಎಂದು ಬರೆದು ಕೇಳಿದಳು ವಾಣಿ. ಅದೇ ವೇಳೆಗೆ ಅಲ್ಲಿಗೆ ಬಂದ ವಿಶ್ವ ಅವಳ ಪ್ರತಿಕ್ರಿಯೆಗೆ ನಕ್ಕ. ವಾಣಿಗೆ ಮೈಯೆಲ್ಲಾ ಉರಿದು ಹೋಯಿತು. ನಿಮ್ಮನ್ನು ನಂಬಿ ಮನೆ, ಮಠ ಎಲ್ಲವನ್ನೂ ಬಿಟ್ಟು ಬಂದಿದ್ದೆ.  ಇದೊಳ್ಳೆ ಬೇಲಿಯೇ ಹೊಲ ಮೆಯ್ದ ಕತೆಯಂತೆ ಆಯಿತು. ನಾನು ಬರಿಯ ಮಾತಲ್ಲ, ಮಾಡಿಯೇ ತೋರಿಸುತ್ತೇನೆ ಎಂದಳು. ತಂದೆ ಮಗ ಇಬ್ಬರೂ ನಕ್ಕು ಅವಳನ್ನು ಹೀಯಾಳಿಸಿದರು. 

ಮರುಕ್ಷಣದಲ್ಲೇ ಮೂರು ಗುಂಡಿನ  ಶಬ್ದ ಕೇಳಿಸಿತು. ಎಲ್ಲರೂ ಓಡೋಡಿ ಬಂದರು. 

ಮರುದಿನ ಪತ್ರಿಕೆಯಲ್ಲಿ ಕ್ರಾಂತಿಕಾರಿ ಗುರು, ಅವರ ಪುತ್ರ ಮತ್ತು ಅವರ ಮುಖವಾಣಿಯಾಗಿದ್ದ ಹೆಣ್ಣೊಬ್ಬಳ ಆತ್ಮಹತ್ಯೆ ಎಂದು ಪ್ರಕಟವಾಗಿತ್ತು. ಹೊಲವನ್ನೇ ಮೇಯ್ದ ಬೇಲಿಗೆ ತಕ್ಕ ಶಿಕ್ಷೆಯಾಗಿತ್ತು. ಹೊಲವೂ ಹಾಳಾಗಿ ಹೋಗಿತ್ತು. 

ಜಗದೀಶ ಚಂದ್ರ 

Monday, November 30, 2020

ಪಶ್ಚಾತ್ತಾಪ - ಘಟನೆ

ಪಶ್ಚಾತ್ತಾಪ 

ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಅದರಲ್ಲಿ ಅನೇಕ ಮಕ್ಕಳು, ಅವರ ತಂದೆ ತಾಯಿಗಳು ಭಾಗವಹಿಸಿದ್ದರು. ಅಲ್ಲಿ ಒಂದು ಭಾಗಕ್ಕೆ ಹೋಗಲು ಎಲ್ಲರೂ ಸರತಿಯ ಸಾಲಲ್ಲಿ ನಿಂತಿದ್ದರು. ಜನ ನುಗ್ಗದಂತೆ ಎರಡು ಉಕ್ಕಿನ ಕಂಬಗಳಿಗೆ ಒಂದು ಪಟ್ಟಿಯನ್ನು ಕಟ್ಟಿದ್ದರು. ನಾನು ಆ ಸಾಲಿನಲ್ಲಿ ನಿಂತಿದ್ದೆ. ಆಗ ಆ ಕಾರ್ಯಕ್ರಮದ ನಿರ್ವಾಹಕರು ನನಗೆ ಬಹಳ ಪರಿಚಯಸ್ತರು. ಅವರು ನನ್ನನ್ನು ಕಂಡು ಇಲ್ಲೇಕೆ ನಿಂತಿದ್ದೀರಿ, ಇಲ್ಲಿ ಬನ್ನಿ ನೀವು ವಿಶೇಷ ಆಹ್ವಾನಿತರು ಎಂದು ಕರೆದರು. ನಾನು ಅವರ ಬಳಿ ಹೋಗುವ ಆತುರದಲ್ಲಿ ಅಲ್ಲಿ ಕಟ್ಟಿದ್ದ ಪಟ್ಟಿಯನ್ನು ಎತ್ತಿ ಕೆಳಗೆ ತೂರಿ ಹೋದೆ. ಆಗ ಬಿಗಿಯಾಗಿ ಕಟ್ಟಿದ್ದ ಆ ಪಟ್ಟಿ ಕಿತ್ತುಕೊಂಡು ಒಂದು ಮಗುವಿನ ಮೊಣಕೈಗೆ ಪಟ್ ಎಂದು ಹೊಡೆದು ಬಿಟ್ಟಿತು. ಹೀಗಾಗುವುದೆಂದು ನನಗೆ ಕಲ್ಪನೆಯೂ ಇರಲಿಲ್ಲ. ಮಗುವಿಗೆ ಹೆಚ್ಚೇನು ಪೆಟ್ಟಾಗಿರಲಿಲ್ಲ. ಅದಕ್ಕೆ ಸಮಾಧಾನ ಮಾಡಲು ಹೋದೆ. ಆದರೆ ಆ ಮಗುವಿನ ತಂದೆ ತಾಯಿಗಳು ನನ್ನನ್ನು ಹಿಗ್ಗಾ ಮುಗ್ಗ ಬೈದರು. ತಪ್ಪು ನನ್ನದಾಗಿತ್ತು. ಆದರೆ ನಾನು ಬೇಕೆಂದು ಮಾಡಿರಲಿಲ್ಲ. ಹೀಗಾಗಿ ನಾನು ಆ ಮಗುವಿಗೆ ಕ್ಷಮೆ ಕೇಳಿ ಅಲ್ಲಿಂದ ಬಂದು ಬಿಟ್ಟೆ. 

ನಂತರ ಅದೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಗಾಗಿ ನನ್ನನ್ನು ಕರೆದರು. ವಿಶೇಷವೆಂದರೆ ನನ್ನಿಂದ ಪೆಟ್ಟಾಗಿದ್ದ ಮಗುವೂ ನನ್ನ ಬಳಿ ಬಹುಮಾನ ಪಡೆದುಕೊಂಡಿತು. ಅದಕ್ಕೆ ಬಹುಮಾನ ಕೊಡುವಾಗ ನನ್ನ ಬಳಿ ಇದ್ದ ಒಂದು ಹೊಚ್ಚ ಹೊಸ ಪೆನ್ ಒಂದನ್ನು ಆ ಮಗುವಿಗೆ ಪಶ್ಚಾತ್ತಾಪದ ಕಾಣಿಕೆ ಎಂದು ಕೊಟ್ಟೆ. 

ಆದರೂ ನನಗೆ ಆ ಮಗುವಿಗೆ ಏಟು ಬಿತ್ತೋ ಏನೋ ಎಂದು ಆ ಘಟನೆ ನೆನಪಿಗೆ ಬರುತ್ತಲೇ ಇತ್ತು. ಆಗ ಆ ಮಗುವಿನ ಅಪ್ಪ ಅಮ್ಮ ಬಂದು ಕ್ಷಮೆ ಕೇಳಿದರು. ನಾನು, ನೀವು ಕ್ಷಮೆ ಕೇಳುವ ಅಗತ್ಯ ಇಲ್ಲ, ತಪ್ಪು ಮಾಡಿದ್ದು ನಾನು, ತಿಳಿಯದೇ ಆದರೂ ಅದು ತಪ್ಪೇ, ನನ್ನನ್ನು ಕ್ಷಮಿಸಿ ಎಂದೆ. ಅಂತೂ ಒಂದು ಸಮಾಧಾನವಾಯಿತು. ಆದರೂ ಆ ಘಟನೆಯು ನನಗೆ ಆಗಾಗ್ಗೆ ನೆನಪಿಗೆ ಬರುತ್ತಲೇ ಇರುತ್ತದೆ. ಬಹುಷಃ ಆ ಮಗುವಿನ ಅಪ್ಪ ಅಮ್ಮಂದಿರಿಗೂ ನನ್ನನ್ನು ಬೈದುದಕ್ಕೆ ಪಶ್ಚಾತ್ತಾಪ ವಾಗಿರಬೇಕು, ಅದಕ್ಕೆ ನನ್ನ ಬಳಿ ಬಂದು ಕ್ಷಮೆ ಕೇಳಿದರು ಎಂದು ಕೊಂಡು ನಾನು ಸಮಾಧಾನ ಮಾಡಿಕೊಂಡೆ. 

ಜಗದೀಶ ಚಂದ್ರ 

Sunday, November 29, 2020

ಗಟ್ಟಿ ನಿರ್ಧಾರ - ಕಥೆ

 ಗಟ್ಟಿ ನಿರ್ಧಾರ 

ಉಂಡಾಡಿ ಗುಂಡನಾಗಿ ದುಶ್ಚಟಗಳಿಗೆ ದಾಸನಾಗಿದ್ದ ಗಂಡನೊಂದಿಗೆ ರಾಧಾ ಮನಸಲ್ಲದ ಮನಸಿನಿಂದ ಬಾಳುತ್ತಿದ್ದಳು. ನಾಕು ವರ್ಷದ ಕಂದನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಮದುವೆಯು ಅವಳಿಗೆ ನಿಜವಾಗಿಯೂ ಒಂದು ಬಂಧನವಾಗಿತ್ತು. ವಿಛೇಧನ ಇತ್ಯಾದಿಗಳು ಅವಳ ನಿಘಂಟಿನಲ್ಲಿರಲಿಲ್ಲ. ಒಳಗೇ ಕೊರಗುತ್ತ ಸಹಿಸಿಕೊಂಡಿರುವುದೊಂದೇ ದಾರಿ ಎಂದುಕೊಂಡು ಜೀವನ ಸವೆಸುತ್ತಿದ್ದಳು. 

ಹಳ್ಳಿಯಲ್ಲಿರುವ ಪುಟ್ಟ ಸ್ವಂತ ಮನೆಯೊಂದೇ ಅವಳಿಗೆ ಆಸರೆಯಾಗಿತ್ತು. ಹೊಲಗದ್ದೆಗಳಲ್ಲಿ ದುಡಿದು ಸಂಪಾದಿಸಿದ ಹಣವನ್ನು ಗಂಡನಿಗೆ ತಿಳಿಯದ ಜಾಗದಲ್ಲಿ ಮುಚ್ಚಿಟ್ಟುಕೊಂಡು ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಳು. ಇದರ ಮಧ್ಯೆ ಗಂಡ ಮಾಡಿದ ಸಾಲವನ್ನು ಹಿಂದುರುಗಿಸಿ ಎಂದು ಸಾಲಕೊಟ್ಟವರ ವರಾತ. ಗಂಡ ಅವರಿಂದ ಬೈಸಿಕೊಂಡು, ಹೊಡೆಸಿಕೊಂಡು ಎಮ್ಮೆ ಚರ್ಮದವನಾಗಿ ಬಿಟ್ಟಿದ್ದ. ಗಂಡನಿದ್ದುದಷ್ಟು ದಿನ ರಾಧಾಳಿಗೆ ಅವರ ಕಾಟವಿರಲಿಲ್ಲ. ಈ ಗಂಡನಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ತನ್ನ ಗತಿಯೇನು ಎಂದು ಒಮ್ಮೊಮ್ಮೆ ಯೋಚಿಸಿ ಬೆದರುತ್ತಿದ್ದಳು. 

ಅಂತೂ ಆ ದಿನ ಬಂದೇ ಬಿಟ್ಟಿತು. ಪೊಲೀಸರು ಬಂದು ಸಾರಿಗೆ ಬಸ್ಸೊಂದು ಅವನಿಗೆ ಡಿಕ್ಕಿ ಹೊಡೆದುದರಿಂದ ಅವನು ಸತ್ತಿದ್ದಾನೆ, ನೀವು ಬಂದು ದೇಹವನ್ನು ಗುರುತಿಸಿ ಎಂದರು. ಅವಳಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಅವಳಿಗೆ ಗಂಡ ನ ಮರಣಕ್ಕಿಂತ ಮುಂದಿನ ಘಟನೆಗಳನ್ನು ನೆನೆದು ಅಳು ಬಂದಿತ್ತು. ದೇಹವನ್ನು ನೋಡಿ ಅವಳಿಗೆ ಅಳು  ಬರಲಿಲ್ಲ, ಬದಲಾಗಿ ಸಿಟ್ಟು ಬಂದಿತ್ತು. ಈ ಸಾಮ್ರಾಜ್ಯಕ್ಕೆ ತಾನು ಇಷ್ಟು ದಿನ ಇಂತಹ ಜೀವನ ನಡೆಸಬೇಕಿತ್ತೇ, ಬದುಕಿದ್ದಾಗಲೂ ಕಷ್ಟ, ಸತ್ತಾಗಲೂ ತೊಂದರೆ ಕೊಡುತ್ತಿರುವ ಇವನನ್ನು ಗಂಡನನ್ನಾಗಿ ಪಡೆದ ತಾನು ಇಂತಹ ನತದೃಷ್ಟೆ ಎಂದುಕೊಂಡು ಮರುಗಿದಳು. 

ಮನೆಗೆ ಬರುತ್ತಿದ್ದಹಾಗೆಯೇ, ಸಾಲ ಹಿಂಪಡೆಯಲು ರಾಜಣ್ಣ, ಜಯಣ್ಣ, ಕೆಂಪಯ್ಯ ಎಲ್ಲರೂ ನಿಂತಿದ್ದರು. ಅವರೆಲ್ಲರೂ ಅವಳಿಗೆ ರಾವಣ, ಕುಂಭಕರ್ಣ, ಹಿರಣ್ಯಕಶಿಪು ಗಳಂತೆ ಕಂಡರು.  ರಾಧಾಳನ್ನು ಕುರಿತು, ನೋಡಮ್ಮ, ಈ ಮನೆಯನ್ನು ಮಾರಿಬಿಡು, ಹಾಗೆಯೆ ಹೆಣವನ್ನು ಪಡೆಯಬೇಡ, ಅದನ್ನು ಮುಂದಿಟ್ಟುಕೊಂಡು ಪರಿಹಾರ ಕೊಡುವವರೆಗೂ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಹೇಳು, ನಾವೆಲ್ಲರೂ ನಿನಗೆ ಆಸರೆ ಯಾಗುತ್ತೇವೆ. ಆ ಹಣವೂ ನಿನಗೆ ಉಪಯೋಗಕ್ಕೆ ಬರುತ್ತದೆ, ನಮ್ಮ ಸಾಲ ತೀರಿಸಲೂ ಅನುಕೂಲವಾಗುತ್ತದೆ ಎಂದರು. ಸಾಲ ಕೇಳಲು ಇವರಿಗೇನು ಹೊತ್ತು, ಗೊತ್ತು ಇಲ್ಲವೇ ಎಂದು ಮನದಲ್ಲೇ ಗೊಣಗಿಕೊಂಡಳು. 

ಮರುದಿನ ಸಾಲ ಹಿಂತಿರುಗಿಸಲು ಎಲ್ಲ ಲೆಕ್ಕ ಪತ್ರಗಳಿಗೂ ಸಹಿ ಹಾಕಿದಳು. ಜಯಣ್ಣನಿಗೆ ಒಂದು ಪತ್ರ ಬರೆದುಕೊಟ್ಟು, ನನಗೆ ಹೆಣ ಇವೆಲ್ಲವನ್ನೂ ಇಟ್ಟುಕೊಂಡು ಗಲಾಟೆ ಮಾಡಲು ಸಾಧ್ಯವಿಲ್ಲ, ನೀವೇ ನನ್ನ ಪರವಾಗಿ ಮಾಡಿ, ಆ ಹಣವನ್ನು ನೀವೇ ಇಟ್ಟುಕೊಂಡು ಉಳಿದ್ದನ್ನು ನನಗೆ ಕೊಡಿ ಎಂದಳು. ಜಯಣ್ಣ ಇವೆಲ್ಲಾ ಏಕಮ್ಮಾ, ಬೇಕೆಂದರೆ ನನ್ನ ಮನೆಗೆ ಬಂದು ಇದ್ದುಬಿಡು ಎಂದ. ಬರುತ್ತಿದ್ದ ಸಿಟ್ಟನ್ನು ನುಂಗಿಕೊಂಡು, ಪರವಾಗಿಲ್ಲ, ನೀವೆಲ್ಲ ಇದ್ದಿರಲ್ಲ, ಅದೇ ನನಗೊಂದು ಸಮಾಧಾನ ಎಂದು ಹೇಳಿದಳು. 

ಅಂದೇ ಅವಳು ಒಂದು ಹಳೆಯ ಬುಟ್ಟಿಯಲ್ಲಿ ತನ್ನ ಪದವಿ ಪತ್ರ, ಒಂದಷ್ಟು ಬಟ್ಟೆ, ಮಗುವಿನ ಸಾಮಾನುಗಳು ಇವೆಲ್ಲವನ್ನೂ ಜೋಡಿಸಿಕೊಂಡು ಸೋದರಿಗಿಂತಾ ಪ್ರಿಯಳಾಗಿದ್ದ ಬಾಲ್ಯದ ಗೆಳತಿ ಅಕ್ಷತಾಳಿಗೆ ಫೋನ್ ಮಾಡಲು ಹೊರಟಳು. ಪಬ್ಲಿಕ್ ಬೂತಿನಲ್ಲಿ ಅವಳೊಂದಿಗೆ ಮಾತನಾಡಿ ಇಲ್ಲಿ ಇನ್ನು ನನಗೇನೂ ಕೆಲಸವಿಲ್ಲ, ನನ್ನವರಾಗಿಯೂ ಯಾರೂ ಇಲ್ಲ, ನನ್ನದೆಂದೂ ಇದ್ದರೂ ಅವು ಈಗ ನನ್ನವಾಗುತ್ತಿಲ್ಲ, ನಾನು ನಿನ್ನ ಬಳಿ ಬರುತ್ತೇನೆ, ನನಗೊಂದು ಕೆಲಸ ಕೊಡಿಸು, ಮನೆಗೆಲಸವಾದರೂ ಸರಿಯೇ, ನನ್ನ ಕಾಲಮೇಲೆ ನಿಂತು ನಾನು ನನ್ನ ಮಗುವನ್ನು ಸಾಕುತ್ತೇನೆ ಎಂದು ಹೇಳಿದಳು. 

ಅಂತೂ ಯಾರಿಗೂ ಹೇಳದೆ, ತನ್ನ ಬುಟ್ಟಿಯನ್ನು, ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಊರು ಬಿಡುವ ಗಟ್ಟಿ ನಿರ್ಧಾರ ತೆಗೆದುಕೊಂಡಳು. ಇಂತಹ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ತನಗೆ ಮೊದಲೇ ಬಂದಿದ್ದರೆ ನಾನು ಈಗ ಎಲ್ಲಿರುತ್ತಿದ್ದನೋ ಎಂದುಕೊಂಡಳು. ಅಂತಹ ದಿನ ಪರಿಸ್ಥಿತಿಯಲ್ಲಿಯೂ ಅವಳ ಮುಖದಲ್ಲಿ ಸಮಾಧಾನವಾಗಿ ಮಂದಹಾಸ ಮೂಡಿತು. 

ಜಗದೀಶ ಚಂದ್ರ 



Sunday, April 26, 2020

ಗುಲಾಬಿ ಹೂ, ನೋಡಿದ್ದು ಸುಳ್ಳಾಗಬಹುದು, ಆತುರದ ತೀರ್ಮಾನ

ಗುಲಾಬಿ ಹೂ  

ಮನೆಯಲ್ಲಿ ಎಲ್ಲರೂ ಹೊರಟ ನಂತರ ಉಸ್ಸಪ್ಪ ಎಂದು ಶಾರದಾ ಸೋಫಾ ಮೇಲೆ ಉರುಳಿದರು. ಅಷ್ಟರಲ್ಲೇ ಶಾರದಾ ಎಂದು ಪಕ್ಕದ ಮನೆಯ ಪಂಕಜ ಕರೆದರೂ. ಶಾರದಾ, ಅಯ್ಯೋ ರಾಮ ಇನ್ನು ಇವರು ಹರಟೆ ಶುರುಮಾಡುತ್ತಾರೆ ಎಂದು ಗೊಣಗುತ್ತಾ ಬಾಗಿಲು ತೆರೆದರು. ಪಂಕಜ ಬಂದವರೇ ಎದುರು ಮನೆಗೆ ಹೊಸದಾಗಿ ಬಂದ ಸೊಸೆ ಕಮಲಾಳ ಮೇಲೆ ದೂರು ಹೇಳಿದರು. ನೋಡ್ರಿ ಪ್ರತಿದಿನ ನಮ್ಮ ಮನೆಯ ಗುಲಾಬಿ ಹೂವನ್ನು ಕಿತ್ತುಕೊಂಡು ಕಾಲೇಜಿಗೆ ಹೋಗುತ್ತಲೇ. ಅದ್ಯಾರಿಗೆ ಕೊಡುತ್ತಾಳೋ, ಈ ಮದುವೆಯಾಗಿರುವ ಹುಡುಗಿ ಎಂದು ವಿಷ ಕಾರಿದರು. ಅಂತೂ ವಿಷವನ್ನು ಕಕ್ಕಿ ಇನ್ನೂ ಏನನ್ನೋ ಹೇಳಲು ಹೊರಟಿದ್ದರು, ಆ ಸಮಯಕ್ಕೆ ಸರಿಯಾಗಿ ಶಾರದಾಳ ಅಣ್ಣ ಬಂದುದರಿಂದ ಅಲ್ಲಿಂದ ಜಾಗ ಖಾಲಿ ಮಾಡಿದರು. 
ಮರುದಿನ ಶಾರದಾ ಕಮಲಾಳನ್ನು ಗಮನಿಸಿದರು. ಅವಳು ಪಂಕಜ ಅವರ ಮನೆಯ ಹೂವನ್ನು ಕಿತ್ತುಕೊಂಡುದನ್ನು ಕಣ್ಣಾರೆ ಕಂಡರು. ಮೂರು ನಾಲ್ಕು ದಿನವೂ ಇದನ್ನು ಗಮನಿಸಿದರು. ಯಾಕೋ ಅವರಿಗೆ ಪಂಕಜ ಹೇಳಿದ್ದು ನಿಜ ಅನ್ನಿಸಲಾರಂಭಿಸಿತು. ಇದು ಕಮಲಾಳ ಪ್ರತಿದಿನದ ದಿನಚರಿ ಎಂದು ಗೊತ್ತಾದಮೇಲೆ ಅವರಿಗೆ ಕಮಲಾಳ ಮೇಲೆ ಅನುಮಾನ, ಸಿಟ್ಟು ಎಲ್ಲವೂ ಬಂತು. ಕಮಲಾ ಒಮ್ಮೆ ಅವರ ಮನೆಗೆ ಬಂದು ಹಬ್ಬದ ಪೂಜೆಗೆ ಕರೆದಾಗ, ಶಾರದಾ ಮೇಲೆ ಉಪಚಾರಕ್ಕೆ ಮಾತನಾಡಿಸಿದರೂ ಅವರ ಧಾಟಿಯಲ್ಲಿ ಕಮಲಾಳ ಮೇಲಿನ ಸಿಟ್ಟು ಇಣುಕುತ್ತಿತ್ತು. ಇದ್ಯಾವುದರ ಪರಿವೆಯೇ ಇಲ್ಲದೆ ಕಮಲಾ ನಗುನಗುತ್ತಲೇ ಮಾತನಾಡುತ್ತಿದ್ದಳು. ಅವಳು ಹೋದಮೇಲೆ ಶಾರದಾ. ಅದೇನು ಹುಡುಗಿಯೋ, ಹೊರಗೆ ಮಾಡುವುದು ಅಂತಹ ಕೆಲಸ, ಮನೆಯಲ್ಲಿ ಪೂಜೆಯಂತೆ ಎಂದು ಗೊಣಗಿದರು. 
ಶಾರದಾ, ಕಮಲಾಳ ಮನೆಗೆ ಪೂಜೆಗೆ ಹೋಗಿದ್ದಾಗ ಅಲ್ಲಿಗೆ ಬಂದಿದ್ದ ಕಮಲಾಳ ಹಿರಿಯ ಸಹೋದ್ಯೋಗಿ ಗೆಳತಿ ವಿಮಲಾ ತಮ್ಮ ಜೊತೆಗೆ ಇನ್ನೊಬ್ಬಾಕೆ ಸಂಗೀತಾ ಅವರನ್ನು ಕರೆದು ತಂದಿದ್ದರು. ಸಂಗೀತಾ, ಕಮಲಳಿಗೆ ಒಂದು ದೊಡ್ಡ ಸಿಹಿ ಪೆಟ್ಟಿಗೆ ನೀಡುತ್ತಾ, ಕಮಲಾ, ನಿಮ್ಮ ಮನಸ್ಸು ಎಷ್ಟು ದೊಡ್ಡದು, ನಿಮ್ಮಿಂದಾಗೆ ನಮ್ಮ ನಿಮ್ಮಿ ಇಂದು ಖುಷಿಯಾಗಿದ್ದಾಳೆ, ಅವಳ ಖಾಯಿಲೆ ಈಗ ಪೂರ್ತಿ ವಾಸಿಯಾಗಿದೆ ಎಂದರು. ಆಗ ಕಮಲಾ, ಅಯ್ಯೋ, ನಾನೇನು ಅಂತ ದೊಡ್ಡ ಕೆಲಸ ಮಾಡಿದೆ ಎಂದಾಗ, ನೀನು ಪ್ರತಿದಿನವೂ ಹೂವನ್ನು ಕೊಟ್ಟು ಅವಳ ಕೈಲಿ ದೇವರಿಗೆ ಹಾಕಿಸುತ್ತಿದ್ದುದು ನಿಮ್ಮಿಯ ಮೇಲೆ ಬಹಳ ಪರಿಣಾಮ ಬೀರಿತು. ಮಾನಸಿಕ ಧೈರ್ಯ ತಂದಿತು. ಒಟ್ಟಿನಲ್ಲಿ ಗಂಡಾಂತರದಿಂದ ಪಾರಾದಳು. ಅವಳು ಇಂದಿಗೂ ಅದು ಸಾಧ್ಯವಾದದ್ದು ನಿಮ್ಮಿಂದಲೇ ಅಂತ ಹೇಳುತ್ತಾಳೆ, ಎಂದರು. ಅದಕ್ಕೆ ಕಮಲಾ, ಹಾಗಾದರೆ ಅದಕ್ಕೆ ಸಲ್ಲಬೇಕಾದ ಕ್ರೆಡಿಟ್ ನಮ್ಮ ಎದುರು ಮನೆಯ ಪಂಕಜಾ ಅವರಿಗೆ ಸಲ್ಲಬೇಕು. ನಾನು ಅವರ ಮನೆಯ ಗಿಡದಲ್ಲಿ ಸೊಂಪಾಗಿ ಬಿಡುತ್ತಿದ್ದ ಗುಲಾಬಿ ಗಿಡದಲ್ಲಿ ಒಂದು ಹೂವನ್ನು ದಿನವೂ ಬಿಡಿಸಿಕೊಳ್ಳಲೇ ಎಂದು ಕೇಳಿದ್ದಾಗ ಆಕೆ ಧಾರಾಳವಾಗಿ ತೊಗೊಳ್ಳಿ ಎಂದು ಅನುಮತಿ ನೀಡಿದ್ದರು. ಆ ಗಿಡವೂ ಇಲ್ಲಿಯ ತನಕ ನಿತ್ಯ ಹೂವು ಕೊಟ್ಟಿತು ಎಂದಾಗ, ಶಾರದಾ ಅವರ ಎದೆ ಝಲ್ಲೆಂದಿತು. ಪಂಕಜಾ ಏಕೆ ತಮಗೆ ಅರ್ಧ ವಿಷಯ ತಿಳಿಸಿ ಇಂಥ ಹುಳಿಹಿಂಡುವ ಕೆಲಸ ಮಾಡಿದರು ಎಂದು ಮನದಲ್ಲೇ ಅಂದುಕೊಂಡರು. ನಾನೂ ಹಿಂದು ಮುಂದು ಯೋಚಿಸದೆ ಹೀಗೆ ನಂಬಿ ಬಿಟ್ಟೆನಲ್ಲಾ ಎಂದು ಪೇಚಾಡಿಕೊಂಡರು. ಕೂಡಲೇ ಹೃತ್ಪೂರ್ವಕವಾಗಿ ಕಮಲಳಿಗೆ ಅಭಿನಂದನೆ ಸಲ್ಲಿಸಿದರು. ಕಮಲಾ ಅವರಿಗೂ ಸ್ವಲ್ಪ ಸಿಹಿ ಕೊಟ್ಟು, ಇದನ್ನು ಮುಖ್ಯವಾಗಿ ಪಂಕಜಾ ಅವರಿಗೆ ಕೊಡಬೇಕು ಎಂದು ಹೇಳಿದಾಗ ಶಾರದಾ ಅವರ ಹೃದಯ ತುಂಬಿ ಬಂತು. ಇಂತಹ ಸ್ವಭಾವದಿಂದಲೇ ಇರಬೇಕು, ಪಂಕಜ ಅವರು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ, ನಿಂತ ನೀರಿನಂತೆ ರಾಡಿಯಾಗಿದ್ದಾರೆ ಎಂದು ಅನ್ನಿಸಿತು. 


ನೋಡಿದ್ದು ಸುಳ್ಳಾಗಬಹುದು 
ಚಿನ್ನೂರಿನ ರಾಧಾ, ಕೇಶವ ದಂಪತಿಗೆ ಮಾಧವ, ಹಾಗು ಮೋಹನ ಇಬ್ಬರು ಮಕ್ಕಳು. ಒಳ್ಳೆ ಸುಸಂಸ್ಕೃತ ಮನೆತನ. ಮಗ ಚೆನ್ನಾಗಿ ಓದಿದ. ಆದರೆ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಪೊಲೀಸ್ ಗೆ ದೂರೂ ಹೋಯಿತು. ಏನೂ ಆಗಲಿಲ್ಲ. ಹೀಗೆ ಒಂದು ವರ್ಷ ಕಳೆಯಿತು. ಆಗ ಇದ್ದಕ್ಕಿದ್ದಂತೆ ಒಂದು ದಿನ ಮನೆಗೆ ಒಂದು ಪತ್ರ ಬಂತು. ಅದು ಮಾಧವನದ್ದು. ಅಪ್ಪಅಮ್ಮಂದಿರ ಕ್ಷಮೆ ಕೇಳಿ ತಾನು ಈಗ ಹಿಮಾಲಯದ ಬಳಿ ಒಂದು ಆಶ್ರಮದಲ್ಲಿ ಸನ್ಯಾಸಿಯಾಗಿದ್ದೇನೆ ಎಂದು ಬರೆದಿದ್ದ. ತನ್ನ ಬಗ್ಗೆ ಯೋಚನೆ ಮಾಡಬೇಡಿ, ನಾನು ಚೆನ್ನಾಗಿ ಇದ್ದೇನೆ, ಮೋಹನ ಈಗ ಚೆನ್ನಾಗಿ ಓದುತ್ತಿರಬಹುದು, ಅವನಾದರೂ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ, ನನ್ನನ್ನು ಕ್ಷಮಿಸಿ ಎಂದು ಬರೆದಿದ್ದ. ಸಾಧ್ಯವಾದರೆ ಒಮ್ಮೆ ಬಂದು ನೋಡುತ್ತೇನೆ, ಆದರೆ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದು ಬರೆದಿದ್ದ. 
ಈ ಘಟನೆ ಆಗಿ ಹಲವಾರು ವರ್ಷಗಳು ಕಳೆದಿವೆ. ರಾಧಾ, ಕೇಶವ ದಂಪತಿಗಳು ಮೋಹನನೊಂದಿಗೆ ಸುಖವಾಗಿ ಬದುಕಿದ್ದಾರೆ. ಮೋಹನನಿಗೂ ಮದುವೆಯಾಗಿ ಈಗ ಎರಡು ಮಕ್ಕಳಾಗಿವೆ. ಇವರೆಲ್ಲರ ಒಡನಾಟದಿಂದ ರಾಧಾ, ಕೇಶವ ದಂಪತಿಗೆ ಈಗ ಮಾಧವನ ವಿಷಯ ಮರೆತೇ ಹೋದಂತಾಗಿದೆ. 
ಈಗ ಊರಿನಲ್ಲಿ ಇದ್ದಕ್ಕಿದ್ದಹಾಗೆ ಯಾವುದೊ ಮಗು ನಾಪತ್ತೆಯಾಯಿತು. ಇದು ಮಕ್ಕಳ ಕಳ್ಳರ ಕಾಟ. ಅವರು ಹೀಗೆ ಮಕ್ಕಳನ್ನು ಮೋಡಿಮಾಡಿ ಕದ್ದುಕೊಂಡು ಹೋಗುತ್ತಾರೆ ಎಂದು ಊರೆಲ್ಲಾ ಗುಲ್ಲಾಯಿತು. ರಾಧಾ ಮಾಧವ ಅವರಿಗೆ ಈಗ ಮಾಧವನ ನೆನಪಾಗಿ, ಮೋಹನನಿಗೆ ಮಕ್ಕಳ ಬಗ್ಗೆ ಹುಷಾರಾಗಿರು, ಎಲ್ಲಿಯೂ ಒಬ್ಬೊಬ್ಬರನ್ನೇ ಕಳಿಸಬೇಡ ಎಂದು ಹಿತವಚನ ನೀಡಿದರು. ಇದಾದ ಕೆಲವು ದಿನಗಳ ನಂತರ ಒಂದು ದಿನ ಮೋಹನ ಬಂದು ಅಕ್ಕ ಪಕ್ಕದ ಮನೆಯವರಿಗೆ ತಾನು ಇಂದು ಬರುತ್ತಿದ್ದಾಗ ಪಕ್ಕದ ಊರಿನಲ್ಲಿ ಯಾರೋ ಒಬ್ಬ ಕಾವಿಧಾರಿ ಒಂದಿಬ್ಬರು ಮಕ್ಕಳನ್ನು ಮಾತನಾಡಿಸುತ್ತಾ ಏನೇನನ್ನೋ ಕೇಳುತ್ತಿದ್ದ, ನನಗೇಕೋ ಅನುಮಾನ ಬಂತು ಎಂದ. ಆಗ ಅವರೆಲ್ಲರೂ ಹೌದು, ಈಗ ಯಾರನ್ನೂ ನಂಬಲು ಆಗುವುದಿಲ್ಲ, ಯಾವ ಹುತ್ತದಲ್ಲಿ ಯಾವ ಹಾವೊ ಎಂದು ಮಾತನಾಡಿಕೊಂಡರು. ಇದು ಹೀಗೆ ಊರಿಗೂ ಹಬ್ಬಿತು. 
ಇದಾದ ಒಂದೆರೆಡು ದಿನದಲ್ಲಿ ಊರಿನಲ್ಲಿ ಮತ್ತೆ ಸುದ್ದಿ. ಯಾರೋ ಮಕ್ಕಳನ್ನು ಕದ್ದುಕೊಂಡು ಹೋಗುವ ಕಳ್ಳ ಸ್ವಾಮಿಯನ್ನು ಊರಿನ ಜನರೇ ಹೊಡೆದು ಸಾಯಿಸಿದ್ದಾರೆ ಎಂದು. ಆಗ ಮೋಹನ, ರಾಧಾ, ಮಾಧವ ಸಧ್ಯ ಆ ಕಳ್ಳ ಸಿಕ್ಕಿದನಲ್ಲ ಎಂದು ಸಂತೋಷ ಪಟ್ಟರು. ಅಷ್ಟರಲ್ಲೇ ಯಾರೋ ಪೋಲಿಸಿನವರು ಬಂದು ಕೇಶವ, ರಾಧಾ ಅನ್ನುವರ ಮನೆ ಇದೆಯೇ ಎಂದು ಕೇಳಿದ. ಬೆಚ್ಚಿದ ಕೇಶವ ಅವರು, ಹೌದು ಇದೇನೇ, ನಾನೆ ಕೇಶವ ಎಂದರು. ಈಗಲೇ ನಮ್ಮೊಂದಿಗೆ ಬನ್ನಿ, ಯಾರೋ ಕೊಲೆಯಾದವರ ಬಳಿ ನಿಮ್ಮ ಹೆಸರಿನ ಒಂದು ಕವರ್ ಇದೆ ಎಂದರು. ಕೇಶವ ಅವರ ಎಧೆ ಝಲ್ ಎಂದಿತು. ಅವರು ಮೋಹನನೊಂದಿಗೆ ಹೊರಟರು. ಅವರು ತಲುಪಿದ್ದು ಕೊಲೆಯಾದ ಸ್ವಾಮೀಜಿಯ ಕಾರಿನ ಬಳಿಗೆ. ಕೇಶವ ಅವರ ಎದೆ ಢವ ಢವ ಎನ್ನುತ್ತಿತ್ತು. ದೇವರೇ ಇದೆಂಥ ಗಂಡಾಂತರ ತಂದೆಯಪ್ಪಾ ಎಂದುಕೊಂಡರು. ಹತ್ತಿರ ಹೋದಾಗ ಹೆಣದ ಮುಖ ಮುಚ್ಚಿದ್ದರು. ಆ ಕವರನ್ನು ನೋಡಿದಾಗ ಅದರ ಮೇಲೆ ರಾಧಾ, ಕೇಶವ ಅವರಿಗೆ ನಮಸ್ಕಾರಪೂರ್ವಕವಾಗಿ ಎಂದು ಬರೆದಿತ್ತು. ಅದರೊಂದಿಗೆ ಒಂದು ಪ್ಯಾಕೆಟ್ನಲ್ಲಿ ಒಂದು ರೇಷ್ಮೆ ಸೀರೆ, ಪಂಚೆ, ಶಲ್ಯ ಇತ್ತು. ಇದೇನು ಎಂದು ಆಶರ್ಯವಾಗಿ ಹೆಣದ ಮುಖಕ್ಕೆ ಮುಚ್ಚಿದ ಬಟ್ಟೆಯನ್ನು ಸರಿಸಿದಾಗ ಮಾಧವಾ ಎನ್ನುತ್ತಾ ಕೇಶವ ಅವರು ಮೂರ್ಛೆ ಹೋದರು. 




ಆತುರದ ತೀರ್ಮಾನ 
ಗುಲಾಬಿಯನ್ನು ಬಿಡಿಸಿಕೊಂಡ ಆಕೆಯನ್ನು ಕದಿಯುತ್ತಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದು. ನಿಜವೇನೆಂದರೆ ಆಕೆ ಅದನ್ನು ರೋಗಿ ಮಗುವೊಂದರ ಕೈಲಿ ದೇವರ ಪೂಜೆಗೆ ತೆಗೆದುಕೊಂಡು ಹೋಗುತ್ತಿರುತ್ತಾಳೆ. 
ಕಳೆದು ಕೊಂಡ ಮಗ ಸನ್ಯಾಸಿ ಆಗಿರುತ್ತಾನೆ. ಅವನು ಬಹಳ ವರ್ಷಗಳ ನಂತರ ತಂದೆ ತಾಯಿಯನ್ನು ನೋಡಲು ಬಂದಾಗ, ಮಗುವೊಂದನ್ನು ಮಾತನಾಡಿಸುತ್ತಿದ್ದುದನ್ನು ಕಂಡು ಮಕ್ಕಳ ಕಳ್ಳ ಎಂದು ಆತುರದ ತೀರ್ಮಾನ ತೆಗೆದುಕೊಂಡು ಜನ ಹೊಡೆದು ಕೊಂದೇಬಿಡುತ್ತಾರೆ. 
ಮೇಲಿನ ಎರಡು ಘಟನೆಯನ್ನು ಕೇಳಿದರಲ್ಲ, ಇದರಿಂದ ನಿಮಗೇನು ತಿಳಿದು ಬಂದು ಎಂದು ಶ್ರೀಗುರೂಜಿ ಅವರು ನೆರೆದಿದ್ದ ಸಭಿಕರನ್ನು ಕೇಳಿದರು. ಎಲ್ಲರೂ ತಮಗೆ ತೋಚಿದಂತೆ ಹೇಲಾರಂಭಿಸಿದರು. ಕಡೆಗೆ ಶ್ರೀಗುರೂಜಿ ಅವರೇ ಹೀಗೆ ಅರ್ಥೈಸಿದರು. 
ಜೀವನದಲ್ಲಿ  ವಿಧ ವಿಧವಾದ ಸಂಧರ್ಭಗಳು, ಘಟನೆಗಳು ಬರುತ್ತವೆ. ನಮ್ಮ ಗ್ರಹಿಕೆಗೆ ತಕ್ಕಂತೆ ಅವನ್ನು ನಾವು ವ್ಯಾಖ್ಯಾನಿಸುತ್ತೇವೆ. ಇದಕ್ಕೆ ನಮ್ಮ ಆಕಾಂಕ್ಷೆ ಹಾಗೂ ನಮ್ಮ ಹಿಂದಿನ ಅನುಭವವೇ ಪ್ರೇರಕವಾಗಿರುತ್ತದೆ. ಹೀಗಾಗಿ ಘಟನೆ ಒಂದೇ ಆದರೂ ವ್ಯಾಖ್ಯಾನಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾವುದೇ ಘಟನೆಗೆ ಆತುರದಿಂದ ತೀರ್ಮಾನಕ್ಕೆ ಬರ ಬಾರದು  ನಮ್ಮ ಅನುಭವ ಹಾಗೂ  ಇತರರ ವ್ಯಾಖ್ಯಾನದ ತುಲನೆ ಇವನ್ನು ಸಮಾಧಾನದಿಂದ. ಸಾವಕಾಶವಾಗಿ ನೋಡಿ ತೀರ್ಮಾನಕ್ಕೆ ಬರಬೇಕು. ಇದರ ಕೊರತೆಯಿಂದಲೇ ಅನೇಕರು ಸರಿಯಾದ ತೀರ್ಮಾನಕ್ಕೆ ಬರದೇ ಸುಖದಿಂದ ವಂಚಿತರಾಗುತ್ತಿದ್ದಾರೆ. 
ಇಂದು ನಡೆಯುವ ಹಲವಾರು ಘಟನೆಗಳಿಗೆ ಸಮಯಸಾಧಕರು ಜನರ ಮುಗ್ಧತೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.  ಅಚಾತುರ್ಯದ ಘಟನೆ ನಡೆಯುತ್ತದೆ ಆದರೆ ಅದಕ್ಕೆ ನಾವೇ ಕಾರಣರೇ, ಇತರರು ಕಾರಣರೇ ಎಂದು ಯೋಚಿಸಿ ತಪ್ಪು ನಮ್ಮದೇ ಆದರೆ ಒಪ್ಪಿಕೊಂಡು ಬಿಡುವುದು ಒಳ್ಳೆಯದು. ತಪ್ಪು ಮಾಡಿದವರಿಗೆ ಜಾತಿ, ಧರ್ಮ ಎಂಬ ಹಣೆಪಟ್ಟಿ ನೀಡಬಾರದು. ತಪ್ಪು ಮಾಡಿದವನ ಧರ್ಮದ ಅಥವಾ ಜಾತಿಯವರು, ಅದನ್ನು ಎಲ್ಲರೆದುರು ಖಂಡಿಸಬೇಕು. ಮುಚ್ಚಿಟ್ಟುಕೊಳ್ಳುವುದಾಗಲಿ, ಸುಮ್ಮನಿದ್ದುಬಿಡುವುದಾಗಲಿ ಮಾಡಬಾರದು. ಇದು ಸಮಾಜಕ್ಕೂ ಒಳ್ಳೆಯದು. 
ಹಾಗೆಯೆ ತಿಳಿದು ತಿಳಿದೂ ತಪ್ಪು ಮಾಡಬಾರದು. ಉದಾಹರಣೆಗೆ ಲಂಚ, ಅಸೆ ಆಮಿಷಗಳಿಗೆ ಬಲಿಯಾಗುವುದು ಇತ್ಯಾದಿ.  ಇಷ್ಟನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿರಾಳರಾಗಿರಬಹುದು, ಸಮಾಜವೂ ಸ್ವಾಸ್ಥ್ಯದಿಂದಿರುತ್ತದೆ. ಘಟನೆಗಳಿಗೆ ನ್ಯಾಯಯುತವಾದ ತೀರ್ಮಾನ ಮುಖ್ಯ, ಇದಕ್ಕೆ ಅನುಭವ, ಉತ್ತಮ ಮಾರ್ಗದರ್ಶನ ಮುಖ್ಯ ಎಂದು ಮಾತು ಮುಗಿಸಿದರು. - ಜಗದೀಶ ಚಂದ್ರ 


ಸದುದ್ದೇಶದ ವ್ಯಕ್ತಿತ್ವ

ಸದುದ್ದೇಶದ ವ್ಯಕ್ತಿತ್ವ

ಅಧಿಕಾರಿಯ ಕೊಠಡಿಯಿಂದ ಹೊರಬಂದ ರಾಮಣ್ಣ ಕುದಿಯುತ್ತಿದ್ದರು. ಯಥಾಪ್ರಕಾರ ಒಳಗೆ ರಾಮಣ್ಣನಿಗೆ ಬೈಗುಳಗಳಾಗಿದ್ದವು. ಕೆಲಸ ಸರಿಯಾಗಿ ಮಾಡುವುದಿಲ್ಲ ಎಂದು ಅಧಿಕಾರಿ ಬೈಯ್ಯುತ್ತಾರೋ, ಅಧಿಕಾರಿ ಸರಿ ಇಲ್ಲ ಎಂದು ರಾಮಣ್ಣ ಕೆಲಸ ಮಾಡುವುದಿಲ್ಲವೋ ಎಂದು ಒಂದು ಗೊಂದಲವೇ ಆಗಿತ್ತು. ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ರಾಮಣ್ಣ ಈಗ ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. ಸದಾ ಕಚೇರಿ, ಅಧಿಕಾರಿಗಳನ್ನು ಬೈಯುವುದೇ ಅವರ ಕಾಯಕವಾಗಿತ್ತು.
ರಾಮಣ್ಣ ಒಳ್ಳೆಯವರೇ. ಯಾವುದೊ ಕೆಟ್ಟ ಘಳಿಗೆಯಲ್ಲಿ ಅವರು ಕೆಲಸ ಮಾಡಲಿಲ್ಲ ಎಂದು ಆಪಾದನೆ ಬಂದಾಗ ಅದನ್ನೇ ತಲೆಗೆ ಹಚ್ಚಿಕೊಂಡು ತಪ್ಪುಗಳನ್ನೇ ಮಾಡುತ್ತಿದ್ದರು. ಹೀಗೆಯೇ ಅದು ಹೆಮ್ಮರವಾಗಿ ರಾಮಣ್ಣನಿಗೆ ಈಗ ಭಡ್ತಿಯೂ ಇಲ್ಲ, ಇಂಕ್ರಿಮೆಂಟು ಇಲ್ಲ. ಇದು ಅವರನ್ನು ಇನ್ನೂ ಘಾಸಿಗೊಳಿಸಿ ಈಗ ಕೆಲಸಕ್ಕೆಬಾರದವನು ಎಂಬ ಮಟ್ಟಕ್ಕೆ ತಳ್ಳಿತ್ತು . ಜೊತೆಗೆ ರಾಮಣ್ಣನಿಗೆ ಮಾಡುತ್ತಿದ್ದ ಕೆಲಸದಲ್ಲಿ ನೆಮ್ಮದಿ ಸಿಗುತ್ತಿರಲಿಲ್ಲ. ಅವರಿಗೆ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಕೊಟ್ಟಿದ್ದರು. ಅವರಿಗೋ ಲೆಕ್ಕ ಪತ್ರಗಳು ಎಂದರೆ ಒಂದು ರೀತಿಯ ಅಲರ್ಜಿ. ಇವೆಲ್ಲವೂ ಸೇರಿ ಈಗ ರಾಮಣ್ಣನನ್ನು ಹುಚ್ಚನನ್ನಾಗಿ ಮಾಡಿಬಿಟ್ಟಿತ್ತು. ಅಲ್ಲಿದ್ದ ಅಧಿಕಾರಿಗಳಿಗೆ ರಾಮಣ್ಣನ ಹಿಂದಿನ ಆಗುಹೋಗುಗಳನ್ನು ತಿಳಿದುಕೊಂಡು ಅದಕ್ಕೆ ಸ್ಪಂದಿಸುವಷ್ಟು ಸಹನೆ ಇರಲಿಲ್ಲ.
ಈಗ ಕಚೇರಿಗೆ ನಾಗರಾಜ್ ಅವರು ಹೊಸದಾಗಿ ಮ್ಯಾನೇಜರ್ ಆಗಿ ಬಂದಿದ್ದರು. ಬಹಳ ಸಾಧು ಮನುಷ್ಯ. ಸಾಧು ಎಂದರೆ ಪುಕ್ಕಲು ಮನುಷ್ಯನಲ್ಲ, ಬಹಳ ಕಟ್ಟುನಿಟ್ಟಿನವರೇ. ಆದರೆ ಅಧಿಕಾರ ಚಲಾಯಿಸದೆ ಜವಾನನಿಂದ ಹಿಡಿದು ಅಸಿಸ್ಟಂಟ್ ಮ್ಯಾನೇಜರ್ ವರೆಗೆ  ಎಲ್ಲರನ್ನೂ  ಚೆನ್ನಾಗಿ ನೋಡಿಕೊಂಡು ಕೆಲಸತೆಗೆಸುವ ಕಲೆ ಅವರಿಗೆ ಚೆನ್ನಾಗಿ ಸಿದ್ಧಿಸಿತ್ತು.
ನಾಗರಾಜ್ ಅವರದು ಪರೋಪಕಾರದ ವ್ಯಕ್ತಿತ್ವ. ಸದಾ ಇತರರನ್ನು ತಾವೇ ಅವರ ಜಾಗದಲ್ಲಿದ್ದರೆ ಹೇಗೋ ಹಾಗೆ ಯೋಚಿಸಿ ಅವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡುತ್ತಿದ್ದರು. ಹಾಗೆಂದು ಯಾರೂ ಅವರನ್ನು ಹಗುರವಾಗಿ ತೆಗೆದುಕೊಳ್ಳುವಂತಿರಲಿಲ್ಲ. ಕೆಲಸ ಎಂದಮೇಲೆ ಕೆಲಸ, ಸರಿಯಾಗಿ ಮಾಡಬೇಕು. ಆಗದಿದ್ದರೆ ಸರಿಯಾದ ಕಾರಣ ಕೊಡಬೇಕು. ಅವರದು ಒಂದು ರೀತಿಯ ಸದುದ್ದೇಶ ವ್ಯಕ್ತಿತ್ವ, ಅಂದರೆ ಎಲ್ಲರೂ ಸಂತೋಷದಿಂದ ಇರಬೇಕು, ಕೆಲಸವನ್ನು ತಮ್ಮ ಮನೆಯದೇ ಎಂಬಂತೆ ಮಾಡಬೇಕು ಇತ್ಯಾದಿ ಅವರ ಮನಸಿನಲ್ಲಿದ್ದವು. ಕೆಲಸ ಚೆನ್ನಾಗಿ ಮಾಡಿ, ನೀವೂ ಹೆಸರು, ಭಡ್ತಿ ತೆಗೆದುಕೊಳ್ಳಿ, ನಮಗೂ, ಕಚೇರಿಗೂ ಒಳ್ಳೆ ಹೆಸರು ತನ್ನಿ, ಇದು ಅವರ ಧ್ಯೇಯ ವಾಕ್ಯ. ಹೀಗಾಗಿ ಕಚೇರಿಯಲ್ಲಿ ಅವರು ಬಹಳ ಜನಪ್ರಿಯ ವ್ಯಕ್ತಿಯಾಗಿದ್ದರು. ಬಾಸ್ ಆದರೂ ಎಲ್ಲರಿಗೂ ಹಿರಿಯಣ್ಣನೂ ಆಗಿದ್ದರು. ಅವರ ಸದುದ್ದೇಶದ ವ್ಯಕ್ತಿತ್ವ, ಪರೋಪಕಾರ ಗುಣ ಅವರನ್ನು ಒಬ್ಬ ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದ್ದವು.
ಈ ನಾಗರಾಜ್ ಅವರಿಗೆ ನಮ್ಮ ರಾಮಣ್ಣನ ಕೆಲಸದ ಮೇಲೆ ಕಣ್ಣುಬಿತ್ತು. ರಾಮಣ್ಣನ ಕಾರ್ಯವೈಖರಿಯನ್ನು ನೋಡಿ ಇತರರನ್ನು ಕರೆಸಿ ಎಲ್ಲ ವಿಷಯಗಳನ್ನು ಕಲೆಹಾಕಿದರು. ರಾಮಣ್ಣನನ್ನು ಒಂದು ದಿನ ಕರೆದರು. ರಾಮಣ್ಣ, ಈ ಯಪ್ಪನಕೈಲೂ ಬೈಸಿಕೊಳ್ಳಬೇಕು ಅಂತ ಅನ್ನಿಸುತ್ತೆ ಎನ್ನುತ್ತಾ ಎದ್ದು ಹೋದ. ನಾಗರಾಜ್ ಅವರು ರಾಮಣ್ಣನಿಗಿಂತ ಚಿಕ್ಕವರು. ಹೀಗಾಗಿ ಅವನಿಗೆ ಗೌರವಕೊಟ್ಟು ಚೆನ್ನಾಗಿ ಮಾತನಾಡಿಸಿದರು. ರಾಮಣ್ಣನಿಗೆ ಆಶರ್ಯವಾಯಿತು. ಇದುವರಿಗೂ ಬೈಸಿಕೊಂಡಿದ್ದೇ ಆಗಿತ್ತು, ಇದು ನಿಜವಾ ಕನಸಾ ಎಂದು ಮೈ ಚಿವುಟಿಕೊಂಡ. ನಿಜವೆಂದು ಗೊತ್ತಾದಮೇಲೆ ಅವನಿಗೆ ನಾಗರಾಜ್ ಅವರ ಮೇಲೆ ತುಂಬಾ ಒಳ್ಳೆಯ ಅಭಿಪ್ರಾಯ ಬಂದಿತು. ಅವರ ಬಳಿ ತನ್ನ ಇಲ್ಲಿಯವರೆಗಿನ ಕತೆಯನ್ನೆಲ್ಲ ಹೇಳಿಕೊಂಡು ಮನಸು ಹಗುರ ಮಾಡಿಕೊಂಡ. ಆಗ ನಾಗರಾಜ್ ಅವರು ನಿಮಗೆ ಇಷ್ಟವಾದ ವಿಭಾಗ ಯಾವುದು? ಅಲ್ಲಿ ನಿಮ್ಮನ್ನು ವರ್ಗಾವಣೆ ಮಾಡಲು ಸಾಧ್ಯವಾದರೆ ನೋಡುತ್ತೇನೆ, ಆಗದಿದ್ದರೆ ಬೇಜಾರು ಮಾಡಿಕೊಳ್ಳಬೇಡಿ ಎಂದರು. ನಾಗರಾಜ್ ಅವರ ಸವಿಮಾತುಗಳೇ ರಾಮಣ್ಣನಿಗೆ ಹಿತವಾಗಿದ್ದವು. ಪ್ರಯತ್ನಿಸಿ ನೋಡಿ ಎಂದು ಹೇಳಿ ಬಂದನು. ರಾಮಣ್ಣ ಹೀಗೆ ಖುಷಿಯಾಗಿದ್ದುದು ಅವನ ಸಹೋದ್ಯೋಗಿಗಳಿಗೆ ಮರೆತೇ ಹೋಗಿತ್ತು.
ರಾಮಣ್ಣನಿಗೆ ಸಮಾಜಸೇವೆ ಇಷ್ಟವಾದ ವಿಭಾಗವಾಗಿತ್ತು. ಅವನು ಅದನ್ನು ನಾಗರಾಜ್ ಅವರಿಗೆ ಹೇಳಿದ್ದ. ಈಗ ಮತ್ತೆ ನಾಗರಾಜ್ ಅವರು ರಾಮಣ್ಣನ್ನು ಕರೆದು, ನೋಡಿ ಸಮಾಜಸೇವೆ ವಿಭಾಗದಲ್ಲಿ ಒಂದು ಪೋಸ್ಟ್ ಗೆ ನಿಮ್ಮನ್ನು ಹಾಕುತ್ತೇನೆ, ನೀವು ಅಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಕೆಲಸಮಾಡಿ ವರ್ಗಮಾಡಿದ ನನಗೆ, ನಿಮಗೂ ಒಳ್ಳೆಯ ಹೆಸರನ್ನು ತರಬೇಕು ಎಂದರು. ರಾಮಣ್ಣನಿಗೆ ಬಹಳ ಸಂತೋಷವಾಗಿತ್ತು. ಸಧ್ಯ ಜೀವನದ ಕೊನೆ ಘಳಿಗೆಯಲ್ಲಾದರೂ ಒಳ್ಳೆಯದಾಗುತ್ತಿದೆಯಲ್ಲ ಎಂದುಕೊಂಡು, ಖುಷಿಯಿಂದ, ಖಂಡಿತಾ ನನ್ನ ಕೈಲಾದ್ದನ್ನು ಮಾಡುತ್ತೇನೆ ಎಂದು ಹೇಳಿದ.
ಆಗ ನಾಗರಾಜ್ ಅವರು, ನಮ್ಮ ಜೀವನವನ್ನು ಒಂದು ಸದುದ್ದೇಶದಿಂದ ಅನುಭವಿಸಬೇಕು. ಆ ಸದುದ್ದೇಶವನ್ನು ನೆರವೇರಿಸಲು ನಾವು ಸಾಧ್ಯವಾದಷ್ಟೂ ಪ್ರಯತ್ನಿಸಬೇಕು. ನಮ್ಮೊಳಗಿನ ವ್ಯಕ್ತಿತ್ವವು ಈ ಸದುದ್ದೇಶಕ್ಕೆ ಪೂರಕವಾಗಿರಬೇಕು. ನಮ್ಮೊಳಗಿನ ವ್ಯಕ್ತಿತ್ವ ಯಾವುದು ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಜೀವನ ನಡೆಸಿದರೆ ಅದರಿಂದ ಸಿಗುವ ಉಪಶಮನಕ್ಕೆ ಸಾಟಿಯೇ ಇಲ್ಲ. ಜಾತಿ, ಪಂಥ, ಧರ್ಮಗಳ ಸಂಕುಚಿತ ಮನೋಭಾವದಿಂದ ಹೊರಬಂದು ನಮ್ಮದೇ ವ್ಯಕ್ತಿತ್ವ ಬೆಳೆಸಿ ಅದನ್ನು ಸಾಧಿಸಲು ಪ್ರಯತ್ನಿಸಿದರೆ ಜೀವನ ಸಾರ್ಥಕವಾಗುತ್ತದೆ. ಪರೋಪಕಾರ, ಸಮಾಜ ಸೇವೆ ಇವು ನಿಮ್ಮಲ್ಲಿನ ವ್ಯಕ್ತಿತ್ವಗಳು. ಇಲ್ಲಿ ಜಾತಿ ಬೇಧವೆಣಿಸದೆ ಉದಾರ ಮನಸ್ಸಿಂದ ಸೇವೆ ಮಾಡಿದರೆ ಅದರಿಂದ ಸುಖವೇ ನಿಜವಾದ ಸುಖ. ನಿಮಗಿಂತ ನಾನು ಕಿರಿಯನಾಗಿರುವುದರಿಂದ ನಿಮಗೆ ಒಳ್ಳೆಯದಾಗಲಿ ಎಂದು ಆ ದೇವರನ್ನು ಬೇಡಿಕೊಳ್ಳುತ್ತೇನೆ ಎಂದರು. ರಾಮಣ್ಣನಿಗೆ ಕಂಠ ಬಿಗಿದು ಬಂತು. ಅವನು ನಾಗರಾಜ್ ಅವರಿಗೆ ನಿಮ್ಮನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ಹರಸುತ್ತೇನೆ ಎಂದು ಹೇಳಿ ಹೊರಬಂದ.
ರಾಮಣ್ಣ ಸಂತೋಷದಿಂದ ಹೊಸ ವಿಭಾಗಕ್ಕೆ ಹೊರಟ.  ರಾಮಣ್ಣನ ಜಾಗಕ್ಕೆ ಮಾದಪ್ಪ ಬಂದರು. ಮಾದಪ್ಪ ಕೆಲಸದಲ್ಲಿ ನಿಷ್ಣಾತರು. ಆದರೆ ಪರೋಪಕಾರ, ಮೃದು ಮಾತುಗಳು, ಇತರರೊಂದಿಗೆ ಹೊಂದುಕೊಂಡು ಬಾಳುವುದು ಇವೆಲ್ಲವೂ ಮಾದಪ್ಪ ಕಂಡರಿಯದ ವಿಚಾರಗಳಾಗಿದ್ದವು. ಸದಾ ಸಿಡಿಮಿಡಿ, ಅವನಿಗೇನಾದರೂ ಕೆಲಸ ಒಪ್ಪಿಸಿದರೆ, ಯಾಕಾದರೂ ಕೊಟ್ಟೆವಪ್ಪಾ ಎಂದು ಅಂದುಕೊಳ್ಳುವಂತೆ ಮಾಡುತ್ತಿದ್ದ. ನಾಗರಾಜ್ ಅವರಿಗೆ ರಾಮಣ್ಣನೇ ಇವನಿಗಿಂತ ವಾಸಿಯೇನೋ ಅನ್ನಿಸಿತು. ಆದರೂ ಅವರ ಪರೋಪಕಾರ ಗುಣ, ಅನುಭೂತಿ (ಎಂಪತಿ), ಮಾದಪ್ಪನನ್ನು ಬದಲಾಯಿಸಬಹುದು ಎಂದು ಹೇಳಿತು.
ಅವರು ಮಾದಪ್ಪನಿಗೂ ಒಂದು ನೀತಿಪಾಠ ಹೇಳಿದರು. ಹೇಳುವ ಮೊದಲು ತಮ್ಮ ಮಾತಿನಿಂದ ಅವನನ್ನು ಮೋಡಿಮಾಡಿದರು.
ಅವರು, ಮಾದಪ್ಪ, ಎಲ್ಲರ ಮುಖದ ಸುತ್ತಲೂ ಒಂದು ಪ್ರಭಾವಳಿ ಇರುತ್ತದೆ. ನಾವು ಹೆಚ್ಚು ಸಂತೋಷದಿಂದ್ದರೆ, ಪರೋಪಕಾರ ಗುಣ ಹೊಂದಿದ್ದರೆ ಅದು ಜನರನ್ನು ಆಕರ್ಷಿಸುತ್ತದೆ. ಇಲ್ಲವಾದರೆ ಅದು ನೆಗೆಟಿವ್ ಆಗಿ ಯಾರನ್ನೂ ಹತ್ತಿರ ಸೇರಿಸುವುದಿಲ್ಲ. ನೀವು ಇಲ್ಲಿ ಕೆಲಸಮಾಡುವ ಕೆಲವೇ ಸಮಯವನ್ನು ಜನರ ಒಳಿತಿಗೆ ಮೀಸಲಿಟ್ಟು ನೋಡಿ, ನಿಮಗೆ ವ್ಯತ್ಯಾಸ ಗೊತ್ತಾಗುತ್ತದೆ ಎಂದರು. ಒಂದು ವಾರ ಮಾಡು, ನಂತರ ನಿನ್ನ ಅನಿಸಿಕೆಯನ್ನು ನನ್ನ ಬಳಿ ಹೇಳು ಎಂದರು.  ಮಾದಪ್ಪ ಒಂದು ವಾರದ ಮಟ್ಟಿಗೆ ಪೂರ್ತಿ ಪಾಸಿಟಿವ್ ಆಗಿದ್ದು ಎಲ್ಲರನ್ನೂ ನಗುನಗುತ್ತಾ ಮಾತನಾಡಿಸಿದ, ಬಂದವರ ಕಷ್ಟ ಸುಖ ವಿಚಾರಿಸಿ ಜಾತಿ ಬೇಧವಿಲ್ಲದೆ ಅವರಿಗೆ ಸಹಾಯ ಮಾಡಿದ. ಇದರಿಂದ ದೊರೆತಂತಹ ಸುಖ ಅವನಿಗೆ ಇದುವರೆಗೂ ಸಿಕ್ಕಿರಲಿಲ್ಲ. ಅವನಿಗೆ ಒಂದು ತರಹ ರೋಮಾಂಚನವಾಯಿತು. ಅಂದೇ ಅವನು ಬದಲಾಗಿ ಹೋದ. ಅವನು ಹಿಂದಿನ ಮಾದಪ್ಪ ಆಗಿರಲಿಲ್ಲ. ಮಾದಪ್ಪನಲ್ಲದ ಈ ಮಾರ್ಪಾಡು ಎಲ್ಲರಿಗೂ ಆಶರ್ಯ ತರಿಸಿತ್ತು. ನಾಗರಾಜ್ ಅವರಿಗಂತೂ ಬಹಳ ಖುಷಿಯಾಗಿತ್ತು.
ಇದೆ ಸಮಯದಲ್ಲೇ ಸಮಾಜ ಸೇವೆ ವಿಭಾಗದಿಂದ ರಾಮಣ್ಣ ಅವರ ಉತ್ತಮ ನಡವಳಿಕೆ, ಕೆಲಸಗಳಿಂದ ಅವರಿಗೆ ಭಡ್ತಿ ನೀಡಲಾಗಿದೆ ಎಂದು ಸಮಾಚಾರ ಬಂತು.
ಇದಾದ ಸ್ವಲ್ಪ ಹೊತ್ತಿನಲ್ಲೇ ರಾಮಣ್ಣ ಒಂದು ಸಿಹಿ ಪೊಟ್ಟಣ ಇಟ್ಟುಕೊಂಡು ನಾಗರಾಜ್ ಅವರ ಬಳಿ ಬಂದ. ನಮಸ್ಕರಿಸುತ್ತಾ, ನೀವು ನನಗಿಂತ ವಯಸಿನಲ್ಲಿ ಕಿರಿಯರಿರಬಹುದು ಆದರೆ ಗುಣದಲ್ಲಿ ಬಹಳ ಹಿರಿಯರು, ನಿಮ್ಮಿಂದ ನನ್ನ ಬಾಳಿಗೆ ನೆಮ್ಮದಿ ಸಿಕ್ಕಿತು. ಇಷ್ಟು ವರ್ಷ ಹೀಗೆ ಇದ್ದಿದ್ದರೆ ನಾನು ಅದೆಲ್ಲೋ ಇರುತ್ತಿದ್ದೆನಲ್ಲ ಎಂದು ಖೇದವಾಗುತ್ತಿದೆ ಎಂದ. ಅಲ್ಲಿಯೇ ಇದ್ದ ಮಾದಪ್ಪನೂ ಹೌದು ಎಂದು ತಲೆದೂಗಿದ. ಆಗ ನಾಗರಾಜ್, ಏನೇನೊ ಅಂದುಕೊಂಡು ಖೇದ ಪಡಬೇಡಿ, ನೋಡಿ ನೀವು ಹೊಗಳಲಿ ಎಂದು ನಾನು ಈ ಕೆಲಸ ಮಾಡಲಿಲ್ಲ. ಒಳ್ಳೆಯದು ಅನ್ನಿಸಿದ್ದನ್ನು ಮಾಡಿದೆ, ಅದೇ ನಿಜವಾದ ಧರ್ಮವಲ್ಲವೇ? ಇನ್ನುಮುಂದೆ ನೀವು ಇತರರಿಗೆ ಮಾದರಿಯಾಗಿ ಬಾಳಿ ಅಷ್ಟೇ ಸಾಕು, ನಾವು ಹೇಗಿದ್ದರೆ ಹಾಗೆ ಇತರರು ಅಲ್ಲವೇ? ಎಂದು ಹೇಳಿ, ಮಾದಪ್ಪನನ್ನು ನೋಡುತ್ತಾ ಇದು ನಿಮಗೂ ಈ ಸಂತಸದ ಬದುಕಿನ ಸೂತ್ರ ಅನ್ವಯಿಸುತ್ತದೆ ಎಂದು ನಕ್ಕರು.
ನಾಗರಾಜ್ ಅವರು ಇನ್ನಷ್ಟು ಸಿಹಿ, ಖಾರ, ಕಾಫಿ, ಆರ್ಡರ್ ಮಾಡಿ ಅದನ್ನು ಕಚೇರಿಗೆ ತರಿಸಿ ರಾಮಣ್ಣ ತಂದ ಸಿಹಿಯನ್ನು ಅದಕ್ಕೆ ಸೇರಿಸಿ ಕಚೇರಿಯ ಇತರರೊಂದಿಗೆ ಸಂತೋಷದಿಂದ ಸವಿದರು. ಇಡೀ ಕಚೇರಿಯೇ ಸಂತಸದಿಂದ ಉಲ್ಲಾಸಭರಿತವಾಗಿತ್ತು. ನಾಗರಾಜ್ ಅವರ ಮುಖದ ಸುತ್ತಲೂ ಪ್ರಭಾವಳಿ ಕಂಗೊಳಿಸುತ್ತಿತ್ತು. - ಜಗದೀಶ ಚಂದ್ರ 

Sunday, April 19, 2020

ಉದ್ಯಾನವನ


ಉದ್ಯಾನವನ
ಅದೊಂದು ಉದ್ಯಾನವನ, ದಿನಬೆಳಗಾದರೆ ಎಲ್ಲರೂ ಅದರೊಳಗೆ ಬಂದು, ನಡೆದೂನಡೆದೂ, ಅದಕ್ಕೆ ಹಾಸಿದ ನೆಲಹಾಸನ್ನು ಸವೆಸುತ್ತಾರೆ, ಹಾಗೆಯೆ ತಮ್ಮ ಚಪ್ಪಲಿಯನ್ನೂ ಸವೆಸಿಕೊಳ್ಳುತ್ತಾರೆ. ಅದರಲ್ಲಿ ಓಡಾಡಿದಮೇಲೆ ಸ್ವಲ್ಪ ಸುಸ್ತಾದರೆ ಕೂಡಲು ಬೆಂಚುಬೇಡವೇ? ಅಲ್ಲಿ ಒಂದೂ ಬೆಂಚು ಇರಲಿಲ್ಲ. ರೆಡ್ಡಿ ಅವರು ಅದರ ಬಗ್ಗೆಯೇ ಮಾತನಾಡುತ್ತಿದ್ದಾಗ ಅಲ್ಲಿಯೇ ನಡೆಯುತ್ತಿದ್ದ ಜುಬ್ಬಾಧಾರಿ ವ್ಯಕ್ತಿಯೊಬ್ಬ, “ನೀವು ಹೇಳುತ್ತಿರುವುದು ನಿಜ, ಕೂಡಲು ಒಂದೂ ಬೆಂಚು ಇಲ್ಲದಿದ್ದರೆ ಇದೆಂಥ ಉದ್ಯಾನವನ, ನೀವೆಲ್ಲರೂ ಸೇರಿ ಒಂದು ಪತ್ರ ಬರೆದುಕೊಡಿ, ನಾನು ಅದನ್ನು ನನಗೆ ಗೊತ್ತಿರುವವರಿಗೆ ಕೊಟ್ಟು ಅವರಿಂದ ಕೆಲಸಮಾಡಿಸುತ್ತೇನೆಎಂದ. ರೆಡ್ಡಿ ಅವರುಸರಿಯಪ್ಪಾ, ಧನ್ಯವಾದಗಳುಎಂದರು. “ನಾನು ನಾಡಿದ್ದು ಇದೇ ವೇಳೆಗೆ ನಿಮ್ಮನ್ನು ಇಲ್ಲೇ ಕಾಣುತ್ತೇನೆ, ಆಗ ಪತ್ರವನ್ನು ಕೊಡಿಎಂದು ಹೇಳಿ ಮುಂದೆ ನಡೆದ. ರೆಡ್ಡಿ ಅವರು ಅದನ್ನು ಇತರರಿಗೆ ಹೇಳಿ, “ನೋಡಿ ಎಂಥ ಪುಣ್ಯಾತ್ಮಎಂದು ಹೊಗಳಿ ಪತ್ರಕ್ಕೆ ಎಲ್ಲರಕೈಲೂ ಸಹಿಹಾಕಿಸಿ ಆತನಿಗೆ ಕೊಟ್ಟರು. ಇದಾದ ಒಂದೆರೆಡುತಿಂಗಳಲ್ಲೇ ಅಲ್ಲಿ ಚಪ್ಪಡಿ ಕಲ್ಲುಗಳು ಬಂದವು, ನಂತರ ಒಂದಷ್ಟು ಬೆಂಚುಗಳೂ ಸಿದ್ದವಾದವು. ಎಲ್ಲರೂ ರೆಡ್ಡಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಇದಾದ ಕೆಲವೇ ದಿನಗಳಲ್ಲಿ ಅಲ್ಲಿದ್ದ ನೆಲಹಾಸಿನ ಮೇಲೆ ಯಾರೋ ಜಾರಿಬಿದ್ದರು. ಕೂಡಲೇ ಎಲ್ಲರೂ ಬೇರೆ ನೆಲಹಾಸನ್ನು ಹಾಕಿಸಬೇಕೆಂದು ಕೋರಿ, ತಾವೇ ಒಂದು ಪತ್ರಬರೆದು, ಅದಕ್ಕೆ ಸಹಿಹಾಕಿಸಿ ರೆಡ್ಡಿ ಅವರಿಗೆ ಕೊಟ್ಟರು. ರೆಡ್ಡಿ ಅವರು ಅದನ್ನು ಜುಬ್ಬಾಧಾರಿ ವ್ಯಕ್ತಿಗೆ ಕೊಟ್ಟರು. ಇದಾದ ಕೆಲವೇ ತಿಂಗಳಲ್ಲಿ ಒಂದಷ್ಟು ನೆಲಹಾಸಿನ ಕಲ್ಲುಗಳು ಅಲ್ಲಿ ಬಂದುಬಿದ್ದವು. ಅದನ್ನು ಹಾಕುವಾಗ ಕೂಡಲು ಹಾಕಿಸಿದ್ದ ಕೆಲವು ಬೆಂಚುಗಳು ಸೊಟ್ಟಗಾದವು. ಕೆಲವಂತೂ ಕೂತರೆ ಅಲ್ಲಾಡತೊಡಗಿದವು. ಅಂತೂ ನೆಲಹಾಸು ಸಿದ್ಧವಾಯಿತು, ಆದರೆ ಬೆಂಚು ಶಿಥಿಲವಾಯಿತು.
ಈಗ ಜುಬ್ಬಾಧಾರಿ ವ್ಯಕ್ತಿ, ಬೆಂಚುಗಳನ್ನು ಬೇಗನೆ ಸರಿಪಡಿಸಬೇಕೆಂದು ತಾನೇ ಒಂದು ಪತ್ರಬರೆದು ಎಲ್ಲರಕೈಲಿ ಸಹಿಹಾಕಿಸಿಕೊಂಡನು. ಸ್ವಲ್ಪ ದಿನಗಳಲ್ಲೇ ಹಳೆಯಬೆಂಚಿನಕಲ್ಲುಗಳು ಚೆನ್ನಾಗಿದ್ದರೂ ಎಲ್ಲಿಯೋ ಮಾಯವಾದವು, ಹೊಸದಾಗಿ ಪಾಲಿಶ್ ಮಾಡಿದ ಗ್ರಾನೈಟ್ ಕಲ್ಲುಗಳು ಬಂದುಬಿದ್ದವು. ಎಲ್ಲರೂ, "ವಾಹ್, ಎಂಥಚೆಂದಎಂದು ಹೊಗಳಿದರು. ಅದರ ಮುಂದೆ ಈಹಿಂದೆ ಹಾಕಿದ್ದ ನೆಲಹಾಸು ಬಲುಸಪ್ಪೆ ಎನ್ನಿಸಿತು. ಜೊತೆಗೆ ಕೆಲವು ನೆಲಹಾಸುಗಳು ಈ ಹೊಸಬೆಂಚುಗಳನ್ನು ಹಾಕುವಾಗ ಕಿತ್ತುಬಂದವು. ಆಗ ಮತ್ತೆ ಆ ಜುಬ್ಬಾಧಾರಿವ್ಯಕ್ತಿ ಬಂದು, ಎಲ್ಲರಿಗೂ, “ಈ ನೆಲಹಾಸುಗಳು ಹೊಸಗ್ರಾನೈಟ್ಬೆಂಚಿಗೆ ಸ್ವಲ್ಪವೂ ಹೊಂದುವುದಿಲ್ಲ, ಬೇರೆ ಹಾಕಿಸಿಬಿಡೋಣಎಂದು ಎಲ್ಲರಿಗೂ ಮನವರಿಕೆ ಮಾಡಿದ. ಸರಿ ಮತ್ತೆ ಪತ್ರ, ಸಹಿ, ಮೊದಲು ನಡೆದಾಡುವ ಜಾಗಕ್ಕೆಹಾಕಿದ್ದ ನೆಲಹಾಸುಗಳು ಮಾಯ.  
ಈಗ ನೆಲಹಾಸಿನ ಜೊತೆಗೆ ಅದರಪಕ್ಕದಲ್ಲಿ ಕ್ಲೇಬ್ಲಾಕಿನ ಎರಡು ಮೋಟುಗೋಡೆಗಳನ್ನು ಹಾಕಿಸಿ, ಜೊತೆಗೆ ಹೊಸ ನೆಲಹಾಸು ಹಾಕಿಸಲಾಯಿತು. ಜೊತೆಗೆ ಉದ್ಯಾನದಬೇಲಿಯಾಗಿದ್ದ ಕರವೀರಪುಷ್ಪಗಿಡದ ಹೆಡ್ಜನ್ನು ಕಿತ್ತು ಅದಕ್ಕೆ ಕಲ್ಲಿನಗೋಡೆಯನ್ನು ಕಟ್ಟಲಾಯಿತು. ಜನ ಈಗ ಮೋರಿಯಂತೆ ಕಾಣುವ ಎರಡು ಮೋಟುಗೋಡೆಗಳ ನಡುವೆ ಸರದಿಯಸಾಲಿನಲ್ಲಿ ನಡೆದವರಂತೆ ನಡೆಯುತ್ತಾರೆ. ಮಳೆ ಬಂದರೆ ಪಕ್ಕಕ್ಕೆ ನೀರುಹರಿಯಲಾಗದೆ ನೀರು ಅಲ್ಲಲ್ಲೇ ನಿಂತುಬಿಡುತ್ತದೆ. ಯಾರಾದರೂ ಬೇಗಹೋಗಬೇಕೆಂದರೆ ಪಕ್ಕಕ್ಕೆಸರಿದು ದಾಟಲಾಗುವುದಿಲ್ಲ, ಏಕೆಂದರೆ ಮೋಟುಗೋಡೆಗಳು ಅಡ್ಡ. ಮುಂದೆ ಏನಾಗುತ್ತದೆ ಎಂದು ಈಗ ನಿಮಗೆ ಅರ್ಥವಾಗಿರಬೇಕು. 
ಈಗ ಜುಬ್ಬಾಧಾರಿ ವ್ಯಕ್ತಿ ಉದ್ಯಾನವನವೆಂಬ ಅಕ್ಷಯಪಾತ್ರೆಯಿಂದ ದ್ವಿಚಕ್ರವಾಹನದಿಂದ ದೊಡ್ಡಕಾರಿಗೆ ಬಡ್ತಿಹೊಂದಿ, ತನ್ನ ಕಚೇರಿಯಲ್ಲಿ ಕುಳಿತು "ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ" ಎಂದು ಪಡ್ಡೆ ಹುಡುಗರು ಪಾಪ್ ಶೈಲಿಯಲ್ಲಿ ಕಿರುಚುತ್ತಿದ್ದ ಹಾಡೊಂದಕ್ಕೆ ಗುನುಗುನಿಸುತ್ತಾ  ಜನರಿಂದ ಬರಬೇಕಾಗಿರುವ ಇನ್ನೊಂದು ಪತ್ರಕ್ಕೆ ಕಾಯುತ್ತಿದ್ದಾನೆ. - ಜಗದೀಶ ಚಂದ್ರ 

ಮಕ್ಕಳ ಸಮಸ್ಯೆ

ಮಕ್ಕಳ ಸಮಸ್ಯೆ 

ಶಂಕರನ ತಂದೆಗೆ ಅಂದು ಕಾಲೇಜಿಗೆ ಬರಲು ಜಿ ಹಾ ಜಿ ಹೇಳಿದ್ದರು. ಅಂದು ಜಿ ಹಾ ಜಿ ಶಾಲೆಗೆ ಬರುತ್ತಿರುವಾಗೆ ಯಾರೋ ಒಬ್ಬರು ಕಾಲೇಜಿನ ಬಗ್ಗೆ ವಿಚಾರಿಸುತ್ತಿದ್ದರು. ಅದನ್ನು ಕೇಳಿಸಿಕೊಂಡ ಅವರು,  ಆ ಮನುಷ್ಯನ್ನು ಮಾತನಾಡಿಸಿದರು. ಅವರು ಸ್ವಲ್ಪ ಒರಟಾಗಿ ಮಾತನಾಡಿದಾಗ,ಯಾಕೋ ಜಿ ಹಾ ಜಿ ಅವರಿಗೆ, ಆ ಭಾಷೆ, ರೀತಿ ಹಿಡಿಸಲಿಲ್ಲ. ಆದರೂ ಏನೋ ಸಹಾಯ ಮಾಡೋಣ ಎಂದಷ್ಟೇ ಮಾತನಾಡಿಸಿದ್ದರು. ಅವರ ಮಾತಿನಿಂದ ನೊಂದು ಜಿ ಹಾ ಜಿ ಅವರೂ ಹೆಚ್ಚು ಮಾತನಾಡದೆ ಕಾಲೇಜಿಗೆ ಬಂದುಬಿಟ್ಟರು.
ಅಂದು ತರಗತಿಯಲ್ಲಿ ಶಂಕರ ಬಂದಿದ್ದ. ಜಿ ಹಾ ಜಿ ಅವನನ್ನು, 'ನಿಮ್ಮ ತಂದೆಯನ್ನು ಕರೆದುಕೊಂಡು ಬರದೇ ಇದ್ದಾರೆ ತರಗತಿಗೆ ಸೇರಿಸಲ್ಲ ಎಂದು ಹೇಳಿದ್ದರೂ ಮತ್ತೆ ಏಕೆ ಬಂದೆ?' ಎಂದು ಗದರಿದರು. ಅವರು ಇನ್ನು ಕೆಲವೇ ನಿಮಿಷಗಳಲ್ಲಿ ಬರುತ್ತಾರೆ, ಅದಕ್ಕೆ ಬಂದಿರುವುದು ಎಂದು ಕುಳಿತೇ ಉತ್ತರಿಸಿದ.
ಇಂದಿನ ಕಾಲದ ಹುಡುಗರು. ನಾವು ಹೆಚ್ಚು ಬೈಯುವ ಹಾಗೂ ಇಲ್ಲ, ಬುದ್ದಿ ಹೇಳುವ ಹಾಗೂ ಇಲ್ಲ. ಹೇಳಿದರೆ ಕೇಳುವುದೂ ಇಲ್ಲ ಎಂದು ಜಿ ಹಾ ಜಿ ಮನದಲ್ಲೇ ಗೊಣಗಿಕೊಂಡು ಸುಮ್ಮನಾದರು. ಇವನಂತೆಯೇ ಇನ್ನಷ್ಟು ಮೊಂಡು ಹುಡುಗರು ಕಾಲೇಜಿನಲ್ಲಿದ್ದರು. ಅವರೆಲ್ಲರ ಧೋರಣೆಯೇ ವಿಚಿತ್ರ. ನಾವೇನೂ ಕಾಲೇಜಿಗೆ ಬಿಟ್ಟಿ ಬಂದಿಲ್ಲ, ದುಡ್ಡು ಕೊಟ್ಟೆ ಬಂದಿರುವುದು, ಅವರ ಕೆಲಸ ಪಾಠ ಮಾಡುವುದು ಅಷ್ಟೇ, ನಾವೆಲ್ಲ ಕಾಲೇಜಿನ ಆಡಳಿತ ಮಂಡಳಿಗೆ ಅವರ ಬಗ್ಗೆ ದೂರು ನೀಡಿ ಅವರನ್ನು ಮನೆಗೆ ಕಳಿಸಬಹುದು ಎಂದು ಉಳಿದವರಿಗೂ ಹೇಳಿಕೊಡುತ್ತಿದ್ದರು.
ಇಂತಹ ಒಂದು ದಂಡೇ ಕಾಲೇಜಿನಲ್ಲಿತ್ತು. ಅವರು ಹಣತೆತ್ತು ಸೀಟನ್ನು ಗಿಟ್ಟಿಸಿದ್ದರಿಂದ, ಕಾಲೇಜಿನ ಆಡಳಿತ ಮಂಡಳಿಗೆ ಅವರ ಮೇಲೆ ಸ್ವಲ್ಪ ಮೃದು ದೋರಣೆ. ಅಧ್ಯಾಪಕರು ಹೆಚ್ಚು ಮಾತನಾಡಿದರೆ, ಅವರಿಂದಲೇ ನಿಮಗೆ ಸಂಬಳ ಬರುತ್ತಿರುವುದು, ಅಂಥವರು ಇಲ್ಲದ್ದಿದ್ದರೆ ನಾವು ಕಾಲೇಜು ಮುಚ್ಚಿ ಮನೆಗೆ ಹೋಗಬೇಕು ಎಂದು ಕಾರಣ ನೀಡುತ್ತಿದ್ದರು. ಇದನ್ನು ಈ ದಂಡು ದುರುಪಯೋಗ ಪಡಿಸಿಕೊಳ್ಳುತ್ತಿತ್ತು. ಅಧ್ಯಾಪಕರಿಗೆ ಅಗೌರವ, ತರಗತಿಯಲ್ಲಿ ತೊಂದರೆ ಕೊಡುವುದು, ಅಂಕ ಕಡಿಮೆ ಬಂದರೆ ಅಧ್ಯಾಪಕರೇ ಸರಿಯಾಗಿ ಪಾಠ ಮಾಡಲಿಲ್ಲ ಎಂದು ದೂರುವುದು ಇವೆಲ್ಲಾ ಸರ್ವೇ ಸಾಮಾನ್ಯವಾಗಿತ್ತು. ನಡತೆ ಎಂಬುದಂತೂ ಕಿಂಚಿತ್ತೂ ಇರಲಿಲ್ಲ.
ತರಗತಿ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ ಜಿ ಹಾ ಜಿ ಅವರಿಗೆ ಪ್ರಾಂಶುಪಾಲರಿಂದ ಕರೆ ಬಂತು. ತರಗತಿಯನ್ನು ಮುಗಿಸಿ ಅವರ ಬಳಿಗೆ ಹೋದರು. ಆಗ ಅವರು ಅಲ್ಲಿಗೆ ಬಂದಿದ್ದ ಅತಿಥಿಗಳ ಸಂಗಡ ಮಾತನಾಡುತ್ತಿದ್ದರು. ಅವರು ಅಧ್ಯಾಪಕರ ಬಗ್ಗೆ ಏಕ ವಚನದಲ್ಲಿ 'ಯಾವನು ಆ ಮೇಷ್ಟ್ರು, ಸುಮ್ಮನೆ ಪಾಠ ಮಾಡಿ ಅಂಕ ಕೊಡಲು ಹೇಳಿ' ಎಂದು ಹೇಳುತ್ತಿದ್ದರು. ಜಿ ಹಾ ಜಿ ಅವರು ಹತ್ತಿರ ಹೋಗಿ ನೋಡಿದರೆ, ಅವರಿಗೆ ಬೆಳಿಗ್ಗೆ ಸಿಕ್ಕಿದ ಆಸಾಮಿ. ಆಹಾ, ತಂದೆಯಂತೆಯೇ ಮಗ, ಇಬ್ಬರೂ ಸರಿಯಾಗಿದ್ದಾರೆ, ಇಂತಹವರ ಬಗ್ಗೆ ದೂರು ಹೇಳಿದ್ದು ನನ್ನದೇ ತಪ್ಪು ಎಂದುಕೊಂಡರು. ಆ ಮನುಷ್ಯ ಜಿ ಹಾ ಜಿ ಅಲ್ಲಿಗೆ ಹೋದಾಗ, ಅವರನ್ನು  ಕಂಡು, 'ಇವನಾ, ಬೆಳಿಗ್ಗೆಯೇ ನಾನು ಭೇಟಿ ಮಾಡಿದ್ದೆ' ಎಂದು ಹೇಳಿ, 'ಏನಯ್ಯಾ ನಮ್ಮ ಹುಡುಗ ನಿನಗೆ ಅಷ್ಟೊಂದು ತೊಂದರೆ ಕೊಡುತ್ತಾನಾ? ನಿನಗೆ ಅಂತವರನ್ನು ನೋಡಿಕೊಳ್ಳಲು ಆಗದಿದ್ದರೆ ಮೇಷ್ಟ್ರು ಏಕಾದೆ? ನಿನ್ನ ಕೆಲಸನೇ ಅದಲ್ಲವಾ? ಎಂದು ಜಿ ಹಾ ಜಿ ಅವರಿಗೇ ಬುದ್ಧಿ ಹೇಳಿದ.
ಜಿ ಹಾ ಜಿ ಅವರು, 'ನೋಡಿ ಮಕ್ಕಳಿಗೆ ಸ್ವಲ್ಪ ನಡತೆ ಇರಬೇಕು, ತರಗತಿಗೆ ಸರಿಯಾಗಿ ಬರಬೇಕು, ಕೊಡುವ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು' ಇವೆಲ್ಲವನ್ನೂ ಮಾಡದಿದ್ದರೆ, ನಾವೇನು ಮಾಡಲಾಗುತ್ತದೆ ಎಂದರು. 'ಸುಮ್ಮನಿರಯ್ಯ, ನನ್ನ ಮಗ ಎಲ್ಲಾ ಹೇಳಿದ್ದಾನೆ' ಎಂದು ಮಗನೇ ಸರಿ ಎಂದು ವಾದಿಸಿದ. ಒಂದಷ್ಟು ಮಾತುಕತೆ ನಡೆಯಿತು. ಆದರೆ ಅಲ್ಲಿ ಜಿ ಹಾ ಜಿ ಅವರಿಗೆ ಸ್ವಲ್ಪವೂ ಸಹಕಾರವಿರಲಿಲ್ಲ. ಸುಮ್ಮನೆ ಮಾತನಾಡದೆ ಎದ್ದು ಬಂದು ಬಿಟ್ಟರು.
ಹೀಗೆಯೇ ಇನ್ನೊಬ್ಬ ಹುಡುಗನ ತಂದೆಯೂ ಬಂದಿದ್ದರು. ಅವರಂತೂ 'ಸ್ವಾಮಿ, ನಾವು ಹುಡುಗನನ್ನು ಕಾಲೇಜಿಗೆ ಹಾಕಿದ್ದೇವೆ, ಅವನನ್ನು ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ, ಸರಿಯಾಗಿ ನಡೆದುಕೊಳ್ಳದಿದ್ದರೆ ಬೂಟು ಕಾಲಲ್ಲಿ ಒದ್ದು ಬಿಡಿ' ಎಂದು ಬುದ್ಧಿವಾದ ಹೇಳಿದರು
ಹೀಗೆಯೇ ಒಬ್ಬ ಹುಡುಗನ ತಾಯಿಯಂತೂ, ನನ್ನ ಮಗನಿಗೆ ನಾನು ಸಾಕಷ್ಟು ಹೇಳಿದ್ದೇನೆ, ನಾನು ಹೆಚ್ಚು ಮಾತನಾಡಿದರೆ 'ಹುಟ್ಟಿಸಿದ್ದು ನೀವು, ನೋಡಿಕೊಳ್ಳುವುದು ನಿಮ್ಮ ಕರ್ತವ್ಯ" ಎನ್ನುತ್ತಾನೆ. ನೀವೇ ಅವನನ್ನು ಸರಿದಾರಿಗೆ ತರಬೇಕು ಎಂದು ಅಳಲು ಶುರು ಮಾಡಿದರು.
ಇನ್ನೊಂದು ಹುಡುಗಿಯ ಬಗ್ಗೆ ದೂರಿದ್ದುದು ಅವಳ ಉಡುಗೆ ತೊಡುಗೆಯ ಬಗ್ಗೆ. ಸಿನಿಮಾ ನಟಿಯರನ್ನು ಮೀರಿಸುವಂತೆ ಬಟ್ಟೆ ಧರಿಸುತ್ತಾಳೆ, ಎಲ್ಲರ ಗಮನ ಸೆಳೆಯುವುದೇ ಅವಳ ಗುರಿ. ಇದನ್ನು ಅವಳ ತಂದೆ ತಾಯಿಯರಿಗೆ ಹೇಳಿದರೆ, ಅವಳ ತಾಯಿ 'ನಮಗಂತೂ ನಮಗೆ ಬೇಕಾದಂತೆ ಇರಲು ನಮ್ಮ ಅಪ್ಪ ಅಮ್ಮ ಬಿಡಲಿಲ್ಲ, ನಿಮಗೇಕೆ ಅವಳ ಬಗ್ಗೆ ಹೊಟ್ಟೆಕಿಚ್ಚು ' ಎಂದಳು. 'ಹೆಣ್ಣು ಮಕ್ಕಳು, ಬಟ್ಟೆ ಸರಿಯಾಗಿ ಧರಿಸಬೇಕಲ್ಲವೇ' ಎಂದರೆ 'ಬಟ್ಟೆ ಹೇಗೆ ಧರಿಸಬೇಕು ಎಂದು ಎಲ್ಲಿ ಹೇಳಿದೆ, ನನಗೆ ಆ ಪಟ್ಟಿ ಕೊಡಿ' ಎಂದಳು. ಆಗ ಅವಳ ತಂದೆ, 'ಮೊದಲು ಈ ನನ್ನ ಹೆಂಡತಿಗೆ ಬುದ್ಧಿ ಹೇಳಿ, ನಾನು ಎಷ್ಟು ಹೇಳಿದರೂ ಮಗಳಿಗೆ ಆ ರೀತಿಯ ಬಟ್ಟೆ ತೊದಲು ಇವಳೆ ಪ್ರಚೋದಿಸುತ್ತಾಳೆ' ಎಂದು ದೂರಿದರು. ಜಿ ಹಾ ಜಿ ಅವರ ಎದುರಿಗೆ ಗಂಡ ಹೆಂಡತಿಯ ಜಗಳ ಪ್ರಾರಂಭವಾಯಿತು.
ಅಂತೂ ಅಂದುಜಿ ಹಾ ಜಿ ಅವರಿಗೆ ಇಂತಹ ಮಕ್ಕಳ, ಅವರ ತಂದೆ ತಾಯಿಯರ ವಾದಗಳನ್ನು ಕೇಳುವುದರಲ್ಲೇ ಸಮಯ ಕಳೆದು ಹೋಯಿತು. ಅವರಿಗೆ ಮುಖ್ಯವಾಗಿ ಅನ್ನಿಸಿದ್ದು, ಮನೆಯಲ್ಲಿ ಒಂದೇ ಮಕ್ಕಳನ್ನು ಹೆತ್ತು ಅವರನ್ನು ಅತಿ ಮುದ್ದಿನಿಂದ ಬೆಳೆಸಿ ಹಾಳು ಮಾಡಿರುವುದು ಅವರ ತಂದೆ ತಾಯಿಗಳೇ  ಅನ್ನಿಸಿತು. ಅವರಿಗೆ ನಡತೆಯನ್ನೂ ಕಲಿಸದೇ, ಕೇಳಿದ್ದನ್ನೆಲ್ಲಾ ಕೊಡಿಸಿ ಹಾಳು ಮಾಡಿದ್ದರು. ಅವರನ್ನು ತಿದ್ದುವ ಕೆಲಸ ಅಧ್ಯಾಪಕರದೇ ಎನ್ನುವಂತೆ ಮಾತನಾಡುತ್ತಿದ್ದರು. ಇನ್ನು ಕೆಲವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡು ಅಧ್ಯಾಪಕರಿಗೇ ಜವಾಬ್ದಾರಿ ವಹಿಸಿಕೊಳ್ಳಲು ಹೇಳುತ್ತಿದ್ದರು.
ಇಂದಿನ ಈ ಮಕ್ಕಳು, ಅವರ ತಂದೆ ತಾಯಿಗಳು, ಅಧ್ಯಾಪಕರು ಅಬ್ಬಬ್ಬಾ ಒಬ್ಬರದು ಒಂದೊಂದು ರೀತಿ. ಒಟ್ಟಿನಲ್ಲಿ ನಡತೆ ಎಂಬುದು ಬರುಬರುತ್ತಾ ಕಾಣೆಯಾಗುತ್ತಿದೆ ಎಂದು ಜಿ ಹಾ ಜಿ ಅವರಿಗೆ ಅನ್ನಿಸಿತು. ಕೆಲವು ಬಾರಿ ಅಧ್ಯಾಪಕರದೂ ತಪ್ಪಿರುವ ಸಾಧ್ಯತೆ ಇರುತ್ತಿತ್ತು. ಏನೇ ಆಗಲಿ ಇದೊಂದು ಸೂಕ್ಷ್ಮವಾದ ಸಮಸ್ಯೆ, ಬಗೆಹರಿಸಲು ತಂದೆ, ತಾಯಿ, ಅಧ್ಯಾಪಕರೂ ಸೇರಿ ಮಾತನಾಡಿ ಒಮ್ಮತಕ್ಕೆ ಬರಬೇಕು ಇಲ್ಲದಿದ್ದಲ್ಲಿ ಇದು ಬಗೆಹರಿಯದ ಸಮಸ್ಯೆ ಆಗುತ್ತದೆ ಎಂದು ಜಿ ಹಾ ಜಿ ಅಂದುಕೊಂಡರು. ಮುಖ್ಯವಾಗಿ ಇದನ್ನು ಮನೆಯಲ್ಲಿಯೇ ಕಲಿಸಬೇಕು, ಮನೆಯೇ ಮೊದಲ ಪಾಠಶಾಲೆ, ದೊಡ್ಡವರಾದ ಮೇಲೆ ಹೇಳಿದರೆ ತೊಂದರೆಗಳು ಹೆಚ್ಚುತ್ತವೆಯೇ ಹೊರತು ಬಗೆಹರಿಯುವುದಿಲ್ಲ. ಜೊತೆಗೆ ಹದಿವಯಸ್ಸಿನ ಸಮಸ್ಯೆಗಳೂ ಸೇರಿ ಬಿಟ್ಟರೆ ಇನ್ನೂ ಗೋಜಲು ಗೋಜಲು ಆಗಿಬಿಡುತ್ತದೆ ಅಲ್ಲವೇ ಎಂದು ನೊಂದುಕೊಂಡರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಜಿ ಹಾ ಜಿ ಅವರಿಗೆ  ನೆನಪಿಗೆ ಬಂದು, ಅಧ್ಯಾಪಕನಾಗಿ ನನ್ನ ಮೇಲೆ ಎಷ್ಟೊಂದು ಜವಾಬ್ದಾರಿಗಳು, ಏನಾದರೂ ನನ್ನಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಬೇಕು ಎಂದುಕೊಂಡು ತಮ್ಮ ಕೋಣೆಯ ಕಡೆಗೆ ಚಿಂತಿಸುತ್ತಾ ಹೊರಟರು. - ಜಗದೀಶ ಚಂದ್ರ



Saturday, April 18, 2020

ಮದರ್ಟಂಗೋ, ತಾಯಿನುಡಿಯೊ - ಘಟನೆ

ಮದರ್ಟಂಗೋ, ತಾಯಿನುಡಿಯೊ 
ಗೆಳೆಯ ಹೇಳಿದ್ದು - ಪಕ್ಕದ ಮನೆಗೆ ಯಾರೋ ಹೊಸಬರು ಬಂದಿದ್ದರು. ಆ ಮನೆಯಲ್ಲಿ ಒಂದು ಪುಟ್ಟ ಹುಡುಗ ಓಡಾಡುತ್ತಿದ್ದ. ನಮ್ಮ ಪುಟ್ಟನಿಗೆ ಒಬ್ಬ ಗೆಳೆಯ ಸಿಗುತ್ತಾನೆ ಎಂದು ಸಂತೋಷ. ನನ್ನ ಅಮ್ಮ, 'ಯಾರೋ ಹೊಸಬರು ಬಂದಿರುವುದು, ಎಲ್ಲಿಯವರೋ' ಎಂದು ನನ್ನನ್ನು ಕೇಳಿದರು. ನನಗೇನು ಗೊತ್ತಿರಲಿಲ್ಲ. ಉತ್ತರ ಹೇಳುವ ಮೊದಲೇ ನಮ್ಮ ಪುಟ್ಟ, 'ಅವರು ಕನ್ನಡ ಮಾತನಾಡುತ್ತಾರೆ, ಅವರ ಮನೆಯಲ್ಲಿ ಒಬ್ಬ ಹುಡುಗ ಇದ್ದಾನೆ' ಎಂದ. 'ಅವರು ಕನ್ನಡ ಮಾತನಾಡುತ್ತಾರೆ ಎಂದು ನಿನಗೆ ಹೇಗೆ ಗೊತ್ತು' ಎಂದರೆ, 'ಅವರು ಮನೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತನಾಡುತ್ತಾರೆ ಅದರಿಂದ ಅವರು ಕನ್ನಡಿಗರು' ಎಂದ. ಇಂಗ್ಲಿಷ್ ಮಾತನಾಡಿದರೆ ಕನ್ನಡಿಗರು ಹೇಗಾಗುತ್ತಾರೆ? ಎಂದೆ. 'ಕನ್ನಡ ಮದರ್ ಟಂಗ್ ಇರುವವರೇ ಹಾಗೆ ಇಂಗ್ಲಿಷ್ನಲ್ಲಿ ಮಾತನಾಡುವುವುದು, ನನ್ನ ಗೆಳೆಯರ ಅನೇಕ ಮನೆಯಲ್ಲಿ ಅವರೆಲ್ಲ ಕನ್ನಡ ಗೊತ್ತಿದ್ದರೂ ಮನೆಯಲ್ಲಿ ಇಂಗ್ಲಿಷ್ ಭಾಷೆಯನ್ನೇ ಮಾತನಾಡುವುದು' ಎಂದ. ನನಗೆ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು. ನನ್ನ ಅಮ್ಮ ನನ್ನನ್ನು ನೋಡಿ ನಕ್ಕಳು, ಆ ನಗುವಿನಲ್ಲಿ ವ್ಯಂಗ್ಯ ಇಣುಕುತ್ತಿತ್ತು, ಮಾತೃಭಾಷೆಯನ್ನು ಮರೆತೆಯಾ ಎಂಬ ಪ್ರಶ್ನೆ ಆ ನಗುವಿನಲ್ಲಿತ್ತು. ನನ್ನ ಹೆಂಡತಿಯ ಇಂಗ್ಲಿಷ್ ಅಭಿಮಾನದಿಂದ ನಾನೂ ಸಹಾ ಮಗನೊಂದಿಗೆ ಇಂಗ್ಲಿಷ್ನಲ್ಲೇ ಸಂವಹಿಸುತ್ತಿದ್ದೆ. 'ಈಗ ಮಗನೊಂದಿಗೆ ನಾನು ಕನ್ನಡದಲ್ಲೇ, ನನ್ನ ಇಂಗ್ಲಿಷ್ ಅಭಿಮಾನಿ ಪತ್ನಿ ಇಂಗ್ಲಿಷ್ನಲ್ಲೇ ಸಂವಹಿಸುತ್ತಿದ್ದೇವೆ, ಪುಟ್ಟ ಈಗ ನನಗೆ ಹೆಚ್ಚು ಆತ್ಮೀಯನಾಗಿದ್ದಾನೆ' ಎಂದ ನನ್ನ ಗೆಳೆಯ.
ಜಗದೀಶ ಚಂದ್ರ 

ವಿಶಾಲ ಮನೋಭಾವ

ವಿಶಾಲ ಮನೋಭಾವ 

ರಾಜಮ್ಮ ಸೊಸೆಯ ಜೊತೆ ಸ್ವಲ್ಪ ಮಾತನಾಡುತ್ತಿದ್ದಂತೆ ಅವರ ರಕ್ತದೊತ್ತಡ ಏರಿತು. ಸುಮ್ಮನೆ ನನ್ನನ್ನು ಕರೆಯ ಬೇಡ, ನಾನು ಎಲ್ಲಿಗೂ ಬರುವುದಿಲ್ಲ ಎಂದು ಫೋನ್ ಕುಕ್ಕಿದರು. ಇದನ್ನು ಗಮನಿಸಿದ ನಾಣಯ್ಯ 'ಶುರು ಆಯ್ತಾ ಅತ್ತೆ ಸೊಸೆ ಜಗಳ' ಎಂದರು. ಅದಕ್ಕೆ ಕೋಪದಿಂದ ಧುಮುಗುಡುತ್ತ ರಾಜಮ್ಮ, 'ನಿಮಗೇನು ಗೊತ್ತು ನಮ್ಮ ಕಷ್ಟ' ಎಂದು ಬುಸುಗುಡುತ್ತ ಅಡುಗೆ ಮನೆಗೆ ನಡೆದು ತಮ್ಮ ಸಿಟ್ಟನ್ನು ಅಲ್ಲಿದ್ದ ಪಾತ್ರೆಗಳ ಮೇಲೆ ತೋರಿಸಿಕೊಂಡರು. 
ರಾಜಮ್ಮನ ಸೊಸೆ ರಾಧಾ ಒಳ್ಳೆಯ ಹುಡುಗಿಯೇ. ರಾಜಮ್ಮನೂ ಒಳ್ಳೆಯವಳೇ. ಆದರೆ ಸೊಸೆ ತಾನು ಮಾಡಿದ್ದು ಸರಿ ಎಂದುಕೊಂಡರೆ ಅತ್ತೆ ತಾನು ಮಾಡಿದ್ದು ಸರಿ ಎಂದು ವಾದಿಸುತ್ತಾಳೆ. ಅವರವರ ಮೂಗಿನ ನೇರಕ್ಕೆ ಇಬ್ಬರೂ ಸರಿಯೇ, ಹೊಂದಾಣಿಕೆ ಇರಲಿಲ್ಲ ಅಷ್ಟೇ.
ಈ ಜಗಳವೇ ಬೇಡ ಎಂದು ಸೊಸೆ ಬೇರೆ ಮನೆ ಮಾಡಿ ಅಲ್ಲಿ ಸುಖವಾಗಿದ್ದು ಆಗಾಗ್ಗೆ ರಾಜಮ್ಮನಿಗೆ ಇಷ್ಟ ಇಲ್ಲದಿದ್ದರೂ ಮನೆಯಿಂದ ಏನಾದರು ತಂದು ಅವರಿಗೆ ಕೊಟ್ಟು ಸಮಾಧಾನದಿಂದ ಅತ್ತೆಯನ್ನು ಮಾತನಾಡಿಸುತ್ತಾಳೆ. ಆದರೆ ರಾಜಮ್ಮನಿಗೆ ಈ ಸೊಸೆ, ಮಗನಿಂದ ಬೇರ್ಪಡಿಸಿದ ರಾಕ್ಷಸಿಯಾಗಿ ಕಾಣುತ್ತಾಳೆ. ಆದರೂ ರಾಧಾ ನೇರವಾಗಿಯೇ ಅತ್ತೆ 'ನಿಮಗೆ ನಿಮ್ಮದೇ ಆದ ಕೆಲವು ಅನಿಸಿಕೆಗಳಿವೆ, ಹಾಗೆಯೆ ನನ್ನದೂ. ಸುಮ್ಮನೆ ಜಗಳವೇಕೆ ಹೊಂದುಕೊಂಡು ಇರೋಣ' ಎಂದರೂ ರಾಜಮ್ಮ ಒಪ್ಪುವುದಿಲ್ಲ. ಆಗ ರಾಧಾ, 'ನೀವು ತಾಯಿ ಇದ್ದ ಹಾಗೆ, ನಿಮ್ಮಿಂದ ಕಲಿಯುವುದು ಬೇಕಾದಷ್ಟಿದೆ, ಆದರೆ ನನಗೆ ನನ್ನದೇ ಆದ ಕೆಲವು ತೊಂದರೆಗಳಿವೆ, ಹೀಗಾಗಿ ನೀವು ಹೇಳಿದಂತೆ ಕೇಳಲಾಗುವುದಿಲ್ಲ. ಉದಾಹರಣೆಗೆ ಮನೆ ಮಂದಿ ಎಲ್ಲರೂ ಒಂದು ಬಾರಿ ಮಾಡಿದ  ಅಡಿಗೆ ತಿನ್ನಬೇಕೆದು ಎಂದು ನನ್ನ ಅನಿಸಿಕೆ, ನೀವು ಒಬ್ಬರಿಗೂ ಅವರು ಬಂದಾಗ ಬಿಸಿ ಬಿಸಿ ಅಡುಗೆ ಮಾಡು, ಫ್ರಿಜ್ ನಲ್ಲಿ ಅಡುಗೆ ಇಡಬಾರದು ಎಂದೆಲ್ಲ ಹೇಳಿದರೆ ಅದು ನನಗೆ ಸರಿಹೋಗುವುದಿಲ್ಲ. ನಿಮ್ಮನ್ನು ಕಂಡರೆ ನನಗೆ ಖಂಡಿತ ದ್ವೇಷ ಇಲ್ಲ, ಆದರೆ ಈ ಕೆಲವು ವಿಷಯಗಳಲ್ಲಿ ನೀವು ಹೇಳಿದ್ದನ್ನು ಒಪ್ಪಲಾಗುವುದಿಲ್ಲ, ಅದನ್ನೇ ದೊಡ್ಡದು ಮಾಡಬೇಡಿ', ಹೊಂದಿಕೊಂಡು ಹೋಗೋಣ ಎನ್ನುತ್ತಾಳೆ.
ಆಗ ನಾಣಯ್ಯ, ಹೌದು, ರಾಧಾ ಹೇಳುವುದೂ ಸರಿಯೇ, ಎಲ್ಲರೂ ಕುಳಿತು ನಾವು ಏನೆಲ್ಲಾ ಮಾಡಬಹುದು ಎಂದು ಲೆಕ್ಕ ಹಾಕೋಣ ಎಲ್ಲವೂ ಸರಿ ಹೋಗುತ್ತದೆ ಎನ್ನುತ್ತಾರೆ. ಅವರವರನ್ನು ಅವರವರ ಪಾಡಿಗೆ ಬಿಟ್ಟು ಬಿಟ್ಟರೆ ಎಲ್ಲವೂ ಸರಿಹೋಗುತ್ತದೆ, ವಿಶಾಲ ಮನೋಭಾವ ಇರಬೇಕು, ಸಂಕುಚಿತ ಬುದ್ಧಿಯೇ ಈ ಜಗಳಗಳಿಗೆ ಮೂಲ ಕಾರಣ ಎನ್ನುತ್ತಾರೆ. ರಾಜಮ್ಮ ಗಂಡನನ್ನು ನೀವು ಸೊಸೆಯ ಪರವಾಗಿ ವಹಿಸಿಕೊಂಡು ಬರಬೇಡಿ ಎಂದು ಮೂದಲಿಸುತ್ತಾರೆ. ಆಗ ನಾಣಯ್ಯ 'ನಿನ್ನ ಮಗಳು ಇಂತಹ ತಪ್ಪುಗಳನ್ನು ಮಾಡಿದಾಗ ಅವಳು ಮಾಡಿದ್ದೂ ಸರಿ, ಅದೇ ಕೆಲಸ ಸೊಸೆ ಮಾಡಿದರೆ ಅದೇಕೆ ಈ ಪರಿ ಸಿಟ್ಟು' ಎಂದರೆ ಕಲಹ ತಾರಕಕ್ಕೇರುತ್ತದೆ.
ಈಗ ನಾಣಯ್ಯನವರು ಒಬ್ಬರು ಹಿರಿಯ ಸಲಹೆಕಾರರನ್ನು ಹಿಡಿದು ಅವರಬಳಿ ಎಲ್ಲವನ್ನೂ ಹೇಳಿದ್ದಾರೆ. ಅದಕ್ಕೆ ಅವರು 'ನಿಮ್ಮ ಪತ್ನಿಯನ್ನು ನನ್ನ ಬಳಿ ಕಳಿಸಿ, ನಾನು ಅವರಿಗೆ ತಿಳಿ ಹೇಳುತ್ತೇನೆ' ಎಂದಿದ್ದಾರೆ. ರಾಜಮ್ಮ ಆ ಸಲಹೆಕಾರರ ಬಳಿ ಹೋದಾಗ 'ನೋಡಿ ಅಮ್ಮ ನೀವಂದುಕೊಂಡಂತೆ ನಿಮ್ಮ ಸೊಸೆ ಸರಿಹೋಗಬೇಕು ಎಂದರೆ ನಾನು ಹೇಳಿದಂತೆ ನೀವು ಅವಳನ್ನು ನಿಮ್ಮ ಮಗಳು ಎಂಬಂತೆ ಒಂದು ತಿಂಗಳು ನಾಟಕ ಮಾಡಿ, ಅವಳು ಏನು ಮಾಡಿದರೂ ಸಿಡುಕದೆ ಒಂದೆರೆಡು ಒಳ್ಳೆಯ ಮಾತುಗಳನ್ನು ಅಡಿ. ನಂತರ ಅವಳೇ ನಿಮ್ಮ ಅಡಿಯಾಳಾಗಿ ಬಿದ್ದಿರುತ್ತಾಳೆ' ಎಂದರು. ರಾಜಮ್ಮ 'ಒಂದು ತಿಂಗಳು ತಾನೇ, ಅದರ ಮೇಲೆ ಒಂದು ನಿಮಿಷವೂ ಹೆಚ್ಚಾಗಬಾರದು' ಎಂದು ಹೇಳಿ ಮನೆಗೆ ಬಂದಳು.
ಆ ಒಂದು ತಿಂಗಳು ಸೊಸೆಯನ್ನು ಮನೆಗೆ ಕರೆದದ್ದೇನು, ತಾನು ಅವಳ ಮನೆಗೆ ಹೋದದ್ದೇನು, ಅವಳ ನುಡಿ ನಡೆಗಳನ್ನು ಹೊಗಳಿದ್ದೇನು ಇದೆಲ್ಲವನ್ನೂ ಕಂಡ ರಾಧಾಗೆ ಈ ಅತ್ತೆಗೆ ಏನೋ ಆಗಿರಬೇಕು ಎಂದು ಅನುಮಾನ ಬಂತು. ಮಾವನನ್ನು ಕೇಳಿದಾಗ ಅವರು, ಸುಮ್ಮನೆ ಪ್ರಶ್ನಿಸಬೇಡ, ಅವಳು ನಿನ್ನನ್ನು ಮಗಳಂತೆ ನೋಡುತ್ತಿದ್ದಾಳೆ, ನೀನು ಅವಳನ್ನು ಈ ಒಂದು ತಿಂಗಳು ತಾಯಿಯಂತೆ ನೋಡಿಬಿಡು. ಎಲ್ಲವೂ ಸರಿಹೋಗುತ್ತದೆ ಎಂದರು. ರಾಧೆಯು ಸಕಾರಾತ್ಮಕವಾಗಿ ಸ್ಪಂದಿಸಿದಳು. ಅಂತೂ ಒಂದು ತಿಂಗಳು ಅತ್ತೆ ಸೊಸೆ ತಾಯಿ ಮಗಳಂತೆ ಬಾಳಿದರು. ಒಂದು ತಿಂಗಳು ಮುಗಿಯಿತು. ಅವರು ಮತ್ತೆ ಅತ್ತೆ ಸೊಸೆಯಾಗಿ ಬಾಳಲಿಲ್ಲ ತಾಯಿ ಮಗಳಾಗಿಯೇ ಶಾಶ್ವತವಾಗಿ ಬಾಳಿದರು.
ನಾಣಯ್ಯ ಆ ಸಲಹೆಕಾರರ ಬಳಿ ಹೋಗಿ 'ನನ್ನ ಪತ್ನಿ ನಿಮ್ಮ ಬಳಿ ಬರುವುದಿಲ್ಲ, ಈಗ ಅವರಿಬ್ಬರೂ ತಾಯಿ ಮಗಳೇ ಆಗಿಬಿಟ್ಟಿದ್ದಾರೆ, ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು' ಎಂದರು. ಅದಕ್ಕೆ ಅವರು ನಾವೆಲ್ಲರೂ ಜೀವನ ನಡೆಸುತ್ತೇವೆ. ಆದರೆ ಒಬ್ಬೊಬ್ಬರದು ಒಂದೊಂದು ರೀತಿ. ಅವರವರಿಗೆ ಉತ್ತಮ ಅನ್ನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತಿರುತ್ತೇವೆ. ನಾವು ಅಂದುಕೊಂಡದ್ದೇ ಉತ್ತಮ ಎನ್ನುವುದು ತಪ್ಪು. ಇದಕ್ಕೆ ನಾವು ವಿಶಾಲವಾದ ಮನೋಭಾವದಿಂದ ನಡೆದುಕೊಂಡರೆ ಅದು ಉತ್ತಮ ಬಾಳು ಎನ್ನಿಸಿಕೊಳ್ಳುತ್ತದೆ. ಬೇರೆಯವರು ಸಹ ಅವರಿಗೆ ತಿಳಿದ ಮಟ್ಟಿಗೆ ಉತ್ತಮ ಅನ್ನಿಸಿಕೊಂಡಂಥ ಬಾಳನ್ನು ನಡೆಸಲು ಬಿಡಬೇಕು. ನಾನು ನಡೆಸುತ್ತಿರುವ ಜೀವನವೇ ಉತ್ತಮ ಎಂಬ ಅಹಂಭಾವದಿಂದ ದೂರವಿರಬೇಕು. ನಮ್ಮದು ನಿಜವಾಗಿಯೂ ಉತ್ತಮ ಜೀವನವಾದರೆ ಇತರರೇ ನಮ್ಮನ್ನು ಅನುಕರಿಸುತ್ತಾರೆ ಎಂಬ ಮನೋಭಾವ ಹೊಂದಿರಬೇಕು. ನಾನು ನಿಮ್ಮ ಪತ್ನಿಯ ಕೈಲಿ ಮಾಡಿಸಿದ್ದು ಇಷ್ಟೇ ಎಂದರು. 
ಜಗದೀಶ ಚಂದ್ರ 

ಜೀವನಕ್ಕೊಂದು ಉದ್ದೇಶ

ಜೀವನಕ್ಕೊಂದು ಉದ್ದೇಶ 

ಶ್ಯಾಮಲಾ ಪ್ರಖ್ಯಾತವಾದ ನಟಿ. ಚಂದನ ಅವಳ ಆಪ್ತ ಗೆಳತಿ, ಇಬ್ಬರ ಜೀವನ ಶೈಲಿಗಳು ಅಜಗಜಾಂತರ. ಶ್ಯಾಮಲಾ ಅತಿ ಶ್ರೀಮಂತಿಕೆಯ ಜೀವನ ನಡೆಸುತ್ತಿದ್ದಾರೆ, ಚಂದನ ಬಹಳ ಸರಳ ಜೀವಿ. ಆದರೂ ಇಬ್ಬರಿಗೂ ಅದೇನೋ ಸೆಳೆತ. ಶಾಲಾದಿನಗಳಿಂದಲೂ ಗೆಳತಿಯರು. ಅದು ಹಾಗೆಯೆ ಮುಂದುವರೆದಿದೆ. ತಪ್ಪು ಒಪ್ಪುಗಳನ್ನು ಯಾವುದೇ ಮುಜುಗರಗಳಿಲ್ಲದೆ ಹೇಳುತ್ತಾರೆ, ಹಂಚಿಕೊಳ್ಳುತ್ತಾರೆ, ಏನೇ ಆದರೂ ಬೇಸರ ಮಾಡಿಕೊಳ್ಳುವುದಿಲ್ಲ. 
ಶ್ಯಾಮಲಾ ಯಾವಾಗಲೂ ದುಡ್ಡು ದುಡ್ಡು ಎಂದು ಹಲುಬಿದರೆ ಚಂದನ 'ಅದೇಕೆ ಹಾಗೆ ಧನ ಪಿಶಾಚಿ ಹಿಡಿದವರಂತೆ ಆಡುತ್ತೀಯೆ?' ಎಂದು ಬಯ್ಯುತ್ತಾಳೆ. ಅದಕ್ಕೆ ಶ್ಯಾಮಲಾ, 'ಮತ್ತೆ ನಿನ್ನಂತೆ ಭಿಕಾರಿಯಾ ತರಹ ಇರಬೇಕಾ? ಒಂದಷ್ಟು ಜೊತೆ ಬಟ್ಟೆ ಬರೆ ಇಟ್ಟುಕೊಂಡು ಅದೇನು ಜೀವನ ನಡೆಸುತ್ತೀಯೋ' ಎಂದು ಹಂಗಿಸುತ್ತಾಳೆ. ಚಂದನ ಆಗ, 'ಹಾಗೆಯೆ ಇರಬೇಕೆ' ಎಂದು ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ಕೋಟ್ ಮಾಡಿದರೆ ಶ್ಯಾಮಲಾ ಆಗ, ಮುಖೇಶ್ ಅಂಬಾನಿ, ಜಯಲಲಿತಾ, ಬಾಲಿವುಡ್ ಸಿನಿಮಾ ನಟ ನಟಿಯರನ್ನು ಹೆಸರಿಸುತ್ತಾಳೆ. ಕಡೆಗೆ ಶ್ಯಾಮಲಾ ಶ್ಯಾಮಲೆಯೇ, ಚಂದನ ಚಂದನಾನೆ. 
ಚಂದನ, ಮದುವೆ ಬೇಡ ಎಂದು ನಿರ್ಧರಿಸಿ ಒಬ್ಬಳೇ ಒಂದು ಸಣ್ಣ ಮನೆಯಲ್ಲಿದ್ದಾಳೆ. ಅದು ಶ್ಯಾಮಲಾಳ ಭವ್ಯವಾದ ಅರಮನೆಯ ಕಾಂಪೌಂಡ್ನಲ್ಲೆ ಇದೆ. ಶ್ಯಾಮಲಾಳ ಪರಿಚಿತರೊಬ್ಬರ ಕಂಪೆನಿಯಲ್ಲಿ ಸಣ್ಣ ಕೆಲಸದಲ್ಲಿದ್ದಾಳೆ. ಸಾಧ್ಯವಾದಾಗಲೆಲ್ಲ ರಾಮಕೃಷ್ಣಆಶ್ರಮಕ್ಕೆ ಹೋಗಿಬರುತ್ತಾಳೆ. ಬಿಡುವಿನವೇಳೆಯಲ್ಲಿ ಶ್ಯಾಮಲಾಳೇ ಇವಳ ಮನೆಗೆ ಬಂದು ಕುಳಿತು ಹರಟುತ್ತಾಳೆ. 
ಶ್ಯಾಮಲಾ ನೋಡಲು ಶ್ಯಾಮಲೆಯೇ ಆಗಿದ್ದರೂ ಸುಂದರಿ. ಹೀಗಾಗಿ ಇಂದು ಪ್ರಸಿದ್ಧ ನಟಿ ಆಗಿದ್ದಾಳೆ. ಹೆಸರು, ದುಡ್ಡು ಅಧಿಕಾರ ಇವೆಲ್ಲವೂ ಅವಳಿಗೆ ಬೇಕು. ಅದಕ್ಕಾಗಿ ಏನು ಮಾಡಲೂ ತಯಾರಿ. ಮದುವೆ ಮಾಡಿಕೊಳ್ಳಲು ಇಷ್ಟವಿದ್ದರೂ ಅವಳಿಗೆ ಬೇಕಾದಂತಹ ಹುಡುಗ ಇನ್ನೂ ಸಿಕ್ಕಿಲ್ಲ. ಇನ್ನೂ ಹುಟ್ಟಿಲ್ಲ ಎಂದು ಚಂದನಾಳ ಅನಿಸಿಕೆ. ಜೊತೆಗೆ ಸೌಂದರ್ಯವಿದ್ದಾಗ ಚೆನ್ನಾಗಿ ಸಂಪಾದಿಸಿಬಿಡಬೇಕು, ನಂತರ ಹೇಗೋ ಏನೋ ಎಂದು ದುಡಿಯುತ್ತಾಳೆ. ಒಳಗೊಳಗೇ ಅವಳಿಗೆ ಏನೋ ಭಯ, ಅದನ್ನು ತೋರಿಸಿಕೊಳ್ಳುವುದಿಲ್ಲವಾದರೂ ಅದು ಚಂದನಾಳಿಗೆ ಗೊತ್ತಾಗುತ್ತದೆ. ಚಂದನ ಅದಕ್ಕೆ ಬೈದರೂ, ಇವಳು ತಲೆಗೆ ಹಾಕಿಕೊಳ್ಳುವುದಿಲ್ಲ. ದುಡ್ಡಿದ್ದವನೇ ದೊಡ್ಡಪ್ಪ ಕಣೇ ಎಂದು ಚಂದನಳನ್ನೇ ಮೂದಲಿಸುತ್ತಾಳೆ. ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಾಳೆ. ಬೇರೆಯವರ ಎದುರಿಗೆ ತೋರ್ಪಡಿಸಿಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಾಳೆ. ಜೀವನ ಕೃತಕವಾಗಿದೆ, ಮಾನಸಿಕವಾಗಿ ಸುಖವಾಗಿಲ್ಲ. ಜೊತೆಗೆ ಮದುವೆಯ ವಿಷಯದಲ್ಲೂ ಅವಳಿಗೆ ಒಂದು ರೀತಿಯ ಭಯ ಮನೆಮಾಡಿದೆ. ಸೆಲೆಬ್ರಿಟಿ ಆಗಿರುವುದರಿಂದ ಅವಳು ಪ್ರಕೃತಿದತ್ತವಾದ ಜೀವನದಿಂದ ದೂರವಾಗಿದ್ದಾಳೆ. ಹೀಗಾಗಿಯೇ ಅವಳು ಚಂದನಾಳ ಮನೆಗೆ ತಾನೇ ಹೋಗುವುದು. ಅಲ್ಲಿ ಹೋದಾಗ ಮಾತ್ರ ಅವಳು ಶ್ರೀ ಸಾಮಾನ್ಯಳಂತಿರುತ್ತಾಳೆ. ಬೇರೆ ಎಲ್ಲೇ ಹೋದರೂ ಎಲ್ಲವೂ ಕೃತಕ. ಅವಳ ಬಟ್ಟೆ, ಬರೆ ಚಪ್ಪಲಿ ಆಭರಣಗಳು ಇವೆಲ್ಲವನ್ನೂ ಒಂದು ಅಂಗಡಿ ಮಾಡಬಹುದು ಎಂದು ಚಂದನ ಹೇಳುತ್ತಿರುತ್ತಾಳೆ. ಒಟ್ಟಿನಲ್ಲಿ ಶ್ಯಾಮಲಾಳಿಗೆ ಯಾರಮೇಲೂ ನಂಬಿಕೆ ಇಲ್ಲ, ಪುರುಷರೆಲ್ಲರೂ ಕೆಟ್ಟವರು ಎಂಬ ದ್ವೇಷ, ಇವುಗಳಿಂದ ಅವಳಿಗೆ ಉತ್ಸಾಹ, ನೆಮ್ಮದಿ ಯಾವುದೂ ಇಲ್ಲ. ನೋಡಿದವರಿಗೆ ಆಹಾ ಎಂತಹ ಶ್ರೀಮಂತೆ, ಎಲ್ಲಕ್ಕೂ ಆಳುಕಾಳು, ಎಂದು ಹೊಟ್ಟೆಕಿಚ್ಚು ಪಡುವಂತೆ ತೋರ್ಪಡಿಸಿಕೊಳ್ಳುತ್ತಾಳೆ. ಆದರೆ ಅದರ ಒಳಗುಟ್ಟು ಅವಳಿಗೆ, ಚಂದನಾಳಿಗೆ ಮಾತ್ರ ಗೊತ್ತು. ಇದಕ್ಕೆಂದು ಯಾರ್ಯಾರೋ ಸ್ವಾಮಿಗಳ ಬಳಿ ಹೊಂದಳಾದರೂ ಅವರು ಇವಳ ದುಡ್ಡನ್ನು ಕಬಳಿಸಿದರೆ ಹೊರತು ಇವಳಿಗೆ ಕಿಂಚಿತ್ತಾದರೂ ಒಳಿತಾಗಲಿಲ್ಲ. 

ಚಂದನ ಒಬ್ಬ ಸ್ವಾಮಿಜಿಗಿಂತ ಹೆಚ್ಚು ತಿಳಿದುಕೊಂಡವಳಾದರೂ ಅವಳು ಎಂದು ತಾನೊಬ್ಬ ಸನ್ಯಾಸಿನಿ ಎಂದು ಹೇಳಿಕೊಳ್ಳಲಿಲ್ಲ, ಶ್ಯಾಮಲಳೂ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಚಂದನ ಅನೇಕ ಬಾರಿ ಬುದ್ಧಿವಾದ ಹೇಳಿದರೂ ಅದು ಶ್ಯಾಮಲಳಿಗೆ ತಟ್ಟುತ್ತಲೇ ಇರಲಿಲ್ಲ. 
ಜೀವನದಲ್ಲಿ ಎಲ್ಲವೂ ಸುಖವಾಗಿಯೇ ನಡೆದುಬಿಟ್ಟರೆ ಹೇಗೆ? ಹಾಗೆಯೇ ಶ್ಯಾಮಲಾಳ ಜೀವನದಲ್ಲೂ ಕೆಲವು ದುಃಖದ ಕ್ಷಣಗಳು ಮೂಡಲಾರಂಭಿಸಿದವು. ಹೊಸನಟಿಯರು ಬಂದು ಇವಳ ಪಟ್ಟಕ್ಕೆ ಚ್ಯುತಿ ಬಂತು. ಬರು ಬರುತ್ತಾ ಹಣದ ಆದಾಯವೂ ನಿಂತು ಹೋಯಿತು. ನಂಬಿದ ಅವಳ ಕೆಲಸಗಾರರು ಅವಳಿಗೆ ಕೈಕೊಟ್ಟರು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಅವಳಿಗೆ ಕೊಂಚ ದುಃಖವನ್ನೂ ಸಹಿಸುವ ಶಕ್ತಿ ಇರಲಿಲ್ಲ. ಮಾನಸಿಕವಾಗಿ ಕುಗ್ಗಿದಳು, ಆತ್ಮಹತ್ಯೆಗೆ ಯತ್ನಿಸಿದಳು. ಚಂದನ ಇದ್ದುದರಿಂದ ಬಚಾವಾದಳು. ಆದರೆ ಅದಕ್ಕೂ ಚಂದನಳನ್ನೇ ಬಯ್ಯತೊಡಗಿದಳು. ಕಡೆಗೆ ಚಂದನಾಳೇ ಆಶ್ರಮದ ಸನ್ಯಾಸಿನಿಯೊಬ್ಬರಿಂದ ಹಿತವಚನ ಹೇಳಿಸಿ ಆತ್ಮಸ್ಥೈರ್ಯ ತುಂಬಿಸಿದಳು. ಸುಖ, ದುಃಖ ಎಲ್ಲವನ್ನು ಭರಿಸುವ ಶಕ್ತಿ ಬರುವಂತೆ ಮಾಡಿಸಿದಳು. ಜೀವನ ಪ್ರೀತಿ, ನಂಬಿಕೆ, ಭರವಸೆ, ಒಳನೋಟ ಇವುಗಳ ಮಹತ್ವವನ್ನು ಅರಿತ ಶ್ಯಾಮಲಾ ಈಗ ಸುಧಾರಿಸಿ ಒಳ್ಳೆಯ ಪಾತ್ರಗಳನ್ನು ಆಯ್ಕೆಮಾಡಿಕೊಂಡು ಅಭಿನಯಿಸಿ ಮತ್ತೆ ಪ್ರಸಿದ್ಧಳಾಗಿದ್ದಾಳೆ. ನಾಯಕಿ ಎಂದಲ್ಲವಾದರೂ ಅವಳು ಮಾಡಿದ ಚಿತ್ರಗಳೆಲ್ಲವೂ ಚೆನ್ನಾಗಿ ಓಡುತ್ತವೆ. ತಾನು ಗಳಿಸಿದ ಹಣವನ್ನು ಚಂದನಾಳ ಸಹಾಯದಿಂದ ಸದ್ವಿನಿಯೋಗ ಮಾಡುತ್ತಾ ಸುಖವಾಗಿದ್ದಾಳೆ. ಮೊದಲಿನ ಕೃತಕ ಜೀವನದಿಂದ ಹೊರಬಂದಿದ್ದಾಳೆ. ಸರಳ ಜೀವನ ನಡೆಸುತ್ತ ಚಂದನಳಿಗೆ ನಿಜವಾದ ಗೆಳತಿಯಾಗಿ ಬದುಕುತ್ತಿದ್ದಾಳೆ. ಅವಳ ಮನೆ ಇದ್ದ ಜಾಗದಲ್ಲಿ ಇಂದು ಒಂದು ಶಾಲೆ ಆರಂಭವಾಗಿದೆ. ಹಾಗೆಯೇ ಅನೇಕ ಕಡೆ ಶಾಲೆಗಳು, ಬಡವರ ವಸತಿಕೇಂದ್ರ ಇತ್ಯಾದಿಗಳೂ ಆರಂಭವಾಗಿದೆ. ಅವಳ ಜೀವನಕ್ಕೊಂದು ಉದ್ದೇಶ ಇರುವುದರಿಂದ ಉತ್ಸಾಹದಿಂದ ಪುಟಿಯುತ್ತಿದ್ದಾಳೆ. - ಜಗದೀಶ ಚಂದ್ರ