Wednesday, June 9, 2021

ಋಣದ ಸೂತಕ

 ಋಣದ ಸೂತಕ

ಋಣವನ್ನು ಎಂದಿಗೂ ಇಟ್ಟುಕೊಳ್ಳಬಾರದು. ಅದು ಜೀವನ ಪರ್ಯಂತ ನಮ್ಮನ್ನು ಕಾಡುತ್ತಲೇ ಇರುತ್ತದೆ. ಯಾರಿಂದಲಾದರೂ ಏನಾದರೂ ಪಡೆದರೆ, ಅದರಲ್ಲೂ ಸಾಲವನ್ನು ಪಡೆಯಬಾರದು. ಪಡೆದರೆ ಅದನ್ನು ತೀರಿಸದೇ ಇರಬಾರದು. ಅದನ್ನು ತೀರಿಸಲು ಆಗದಿದ್ದರೆ ಅದರಿಂದ ಸಿಗುವ ಬೈಗುಳ, ನಿಂದೆ, ಇವುಗಳನ್ನು ಸಹಿಸಿಕೊಳ್ಳಲು ಅಸಾಧ್ಯ.
ನಮ್ಮ ಕೆಲಸದೊಡೆಯನ ನಿಂದೆಯ ಮಾತನ್ನು ಸಹಿಸಿಕೊಳ್ಳಬಹುದು, ಯಾರಾದರೊಡನೆ ಜಗಳವಾಡಿ ನಂತರ ಶಾಂತವಾಗಬಹುದು ಆದರೆ ಋಣವಿದ್ದರೆ ಜೀವನವೇ ಕಷ್ಟವಾಗುತ್ತದೆ.
ಮಗುವೊಂದು ಹುಟ್ಟಿದರೆ ಹತ್ತು ದಿನದಲ್ಲಿ ಸೂತಕ ಕಳೆಯುತ್ತದೆ, ಮರಣ ಹೊಂದಿದರೆ ಹನ್ನೊಂದು ದಿನದಲ್ಲಿ ಸೂತಕ ಕಳೆಯುತ್ತದೆ ಆದರೆ ಋಣ ಎಂಬ ಸೂತಕ ಬಂದರೆ ಜೀವಮಾನ ಪರ್ಯಂತ, ಕೆಲವೊಮ್ಮೆ ಜನ್ಮ ಜನ್ಮಾಂತರದಲ್ಲೂ ತೀರಿಸಲು ಬವಣೆ ಪಡಬೇಕು.
ನಮಗೆ ಯಾರಾದರೂ ತುಂಬಾ ಕಾಟ ಕೊಡುತ್ತಿದ್ದರೆ ಅವರನ್ನು ಋಣಪಾತಕಗಳು ಎನ್ನುವುದನ್ನು ಕೇಳಿರಬಹುದು. ಅಂದರೆ, ನಾವು ಹಿಂದೆ ಯಾವುದೊ ಜನ್ಮದಲ್ಲಿ ಅವರ ಋಣ ಉಳಿಸಿಕೊಂಡಿದ್ದೇವೋ ಏನೋ, ಅದನ್ನು ತೀರಿಸಿಕೊಳ್ಳಲು ಅವರು ನಮಗೆ ಹೀಗೆ ಈ ಜನ್ಮದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ಅರ್ಥ. ಮಕ್ಕಳು ಹಠ ಮಾಡುವುದು, ರಚ್ಚೆ ಹಿಡಿಯುವುದು, ಜಗಳ ಮಾಡುವುದು ಮಾಡಿದರೆ, ಆಗ ಅವನ್ನು "ಋಣಪಾತಕಗಳು" ಎಂದು ಬೈಯುತ್ತಾರೆ. ಎಲ್ಲರಿಗೂ ಪಿತೃ ಋಣ, ದೇವ ಋಣ, ಋಷಿ ಋಣ ಎಂದಿರುತ್ತದೆಯೆಂತೆ. ಅದನ್ನು ತೀರಿಸಲು ಪಿತೃಪಕ್ಷದಲ್ಲಿ ಶ್ರಾದ್ಧ ಮಾಡಬೇಕು ಎನ್ನುತ್ತಾರೆ. ಅದೇನೇ ಇರಲಿ, ತಾಯಿ, ತಂದೆ, ಗುರುಗಳು ಇವರಿಗೆ ನಾವು ಸದಾ ಗೌರವ ಕೊಡಲೇ ಬೇಕು. ಇದ್ದಾಗ ಸರಿಯಾಗಿ ನೋಡಿಕೊಂಡರೆ ಋಣ ತೀರಿಸಿದಂತಾಗುತ್ತದೆ. ಅವರೇ ಇಲ್ಲದಾಗ ಎಷ್ಟು ಮಾಡಿದರೆಷ್ಟು ಬಿಟ್ಟರೆಷ್ಟು? ಆದರೆ ಅವರನ್ನು ನೆನೆದು, ಅವರು ಹೇಳಿಕೊಟ್ಟ ದಾರಿಯಲ್ಲಿ ನಡೆದರೂ ಋಣ ಮುಕ್ತರಾಗಬಹುದು.
ಆದ್ದರಿಂದಲೇ ಈ ಜನ್ಮದಲ್ಲಿ ಯಾವುದೇ ರೀತಿಯ ಋಣ ಉಳಿಸಿಕೊಳ್ಳಬೇಡಿ. ಅಲ್ಲಿಗೆ ಅಲ್ಲೇ ತೀರಿಸಿಬಿಡಿ. ಇದಕ್ಕಾಗಿಯೋ ಏನೋ, "ಋಣವೆಂಬ ಸೂತಕವು ಬಹು ಭಾದೆ ಪಡಿಸುತಿದೆ, ಗುಣ ನಿಧಿಯೇ ನೀ ಎನ್ನ ಋಣವ ಪರಿಹರಿಸೋ" ಎಂದು ಪುರಂದರ ದಾಸರು ಬರೆದು, ಅದನ್ನು ಕಳೆಯಲು ದೇವರನ್ನು ಮೊರೆ ಹೋಗುವುದೊಂದೇ ಮಾರ್ಗ ಎಂದು ಹೇಳಿದ್ದಾರೆ.
- ಜಗದೀಶ ಚಂದ್ರ ಬಿ ಎಸ್ - 

No comments:

Post a Comment